ಯಳಂದೂರು: ಪಟ್ಟಣದ ಷಡಕ್ಷರ ದೇವರ ಗದ್ದುಗೆ ಬಳಿಯ ಕಬ್ಬಿನ ಗದ್ದೆಗೆ ಮಂಗಳವಾರ ಮಧ್ಯಾಹ್ನ ಬೆಂಕಿ ಬಿದ್ದ ಪರಿಣಾಮ ಬೆಳೆ ಭಸ್ಮವಾಗಿದೆ.
ಪಟ್ಟಣ ನಿವಾಸಿ ಕೋಮಲಾ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆ ಇದಾಗಿದ್ದು, ಸುಮಾರು 2 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದರು. ಕಟಾವು ಹಂತಕ್ಕೆ ಬಂದಿದ್ದ ಕಬ್ಬಿಗೆ ಇಲ್ಲಿನ ಬಣ್ಣಾರಿ ಅಮ್ಮನ್ ಕಾರ್ಖಾನೆಯವರು ಕಟಾವು ಮಾಡಲು ಪರ್ಮಿಟ್ ನೀಡಿರಲಿಲ್ಲ. ಹಾಗಾಗಿ ಸೋಲಂಗಿ ಬೆಳೆದಿತ್ತು. ಅಲ್ಲದೆ ಇದರ ತರಗು ಒಣಗಿದ್ದ ಪರಿಣಾಮ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು. ಕಬ್ಬಿನ ಗದ್ದೆಯ ನಡುವೆಯೇ ವಿದ್ಯುತ್ ತಂತಿ ಹಾದು ಹೋಗಿದ್ದು ಶಾರ್ಟ್ ಸರ್ಕ್ಯೂಟ್ನಿಂದ ಈ ಅನಾಹುತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಘಟನೆ ಸಂಬಂಧ ಅಗ್ನಿಶಾಮಕ ಸಿಬ್ಬಂದಿಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಯಿತಾದರೂ ಬರಲಿಲ್ಲ. ಇದರಿಂದಾಗಿ ರೈತರು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು. ಆದರೂ ಬೆಂಕಿ ನಂದಿಸಲು ಸಾಧ್ಯವಾಗದ ಕಾರಣ ಕಬ್ಬು ಸುಟ್ಟು ಕರಕಲಾಗಿದೆ.