ಮಂಜೇಶ್ವರ: ಮನೆಯ ಟೆರೇಸಿನ ಮೇಲೆ ಗಾಂಜಾ ಕೃಷಿ ಮಾಡಿದ್ದ ಕುಬಣೂರು ಸನಿಹದ ಬೇಕೂರು ಲನ್ನಟಿಪಾರೆ ನಿವಾಸಿ ಕೆ.ಪಿ.ನಜೀಬ್ ಮೆಹ್ಫೂಸ್(22) ಎಂಬಾತನನ್ನು ಎಸ್ಐ ವಿ.ಕೆ.ಅನೀಶ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕುಂಬಳೆ-ಬಂಬ್ರಾಣ-ಕಳತ್ತೂರು ರಸ್ತೆಯಲ್ಲಿರುವ ಬಾಡಿಗೆ ಕ್ವಾರ್ಟಸ್ನ ಟೆರೇಸ್ನಲ್ಲಿ ಗಾಂಜಾ ಕೃಷಿ ನಡೆಯುತ್ತಿರುವ ಬಗ್ಗೆ ಮಂಜೇಶ್ವರ ತಹಸೀಲ್ದಾರ್ ಪಿ.ಪ್ರಮೋದ್ ಅವರಿಗೆ ಲಭಿಸಿದ ಮಾಹಿತಿ ಮೇರೆಗೆ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ.
ದಾಳಿ ಸಂದರ್ಭ ಎರಡು ತಿಂಗಳ ಬೆಳವಣಿಗೆ ಹೊಂದಿದ್ದ ಮೂರು ಗಾಂಜಾ ಗಿಡಗಳು ಪತ್ತೆಯಾಗಿವೆ. ಮಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ನಜೀಬ್ ಮೆಹ್ಫೂಸ್ ಗಾಂಜಾ ಸೇವನೆ ವ್ಯಸನಿಯಾಗಿದ್ದು, ಗಾಂಜಾ ಮಾರಾಟ ಮಾಡಲು ಮತ್ತು ಸ್ವಂತ ಅಗತ್ಯಕ್ಕೆ ಬಳಸುತ್ತಿದ್ದ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ತಂಡದಲ್ಲಿ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಸುಧೀರ್, ಸಿವಿಲ್ ಪೊಲೀಸ್ ಅಧಿಕಾರಿಗಳಾದ ಪಿ.ಅಜಯನ್, ಟಿ.ಕೆ.ಸದನ್, ಕೊಚ್ಚುರಾಣಿ ಜತೆಗಿದ್ದರು.