ಆನೇಕಲ್: ಇತ್ತೀಚೆಗೆ ಆನ್ಲೈನ್ ವಹಿವಾಟು ಹೆಚ್ಚಾಗುತ್ತಿರುವಂತೆ ಹಣ ಪಾವತಿ ನೆಪದಲ್ಲಿ ವಂಚಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಗೂಗಲ್ಪೇ ಮೂಲಕ ಹಣ ಪಾವತಿ ನೆಪದಲ್ಲಿ ವಂಚಕನೊಬ್ಬ ಬಟ್ಟೆ ಅಂಗಡಿ ಹಾಗೂ ಹಾರ್ಡ್ವೇರ್ ಅಂಗಡಿಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ. ಜತೆಗೆ ಅಂಗಡಿ ಮಾಲೀಕರ ಮೊಬೈಲ್ ಫೋನ್ಗಳನ್ನೂ ಕದ್ದೊಯ್ದಿದ್ದಾನೆ. ಈತನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಆನೇಕಲ್ನ ಅಂಬೇಡ್ಕರ್ ವೃತ್ತದ ಬಳಿಯ ತುಳಸಿ ಕಲೆಕ್ಷನ್ ಎಂಬ ಬಟ್ಟೆ ಅಂಗಡಿಗೆ ನಾಲ್ಕು ದಿನಗಳ ಹಿಂದೆ ಕರೆ ಮಾಡಿದ್ದ ವಂಚಕನೊಬ್ಬ, ಕ್ಯೂಆರ್ ಕೋಡ್ ಬಳಸಿ ಭಾರತ್ಪೇ ಆ್ಯಪ್ ಮೂಲಕ ಹಣ ಪಡೆಯುವ ವ್ಯವಸ್ಥೆ ಅಳವಡಿಸಿಕೊಡುವುದಾಗಿ ಹೇಳಿದ್ದ. ಅದರಂತೆ ಸ್ಥಳಕ್ಕೆ ಬಂದ ಯುವಕನೊಬ್ಬ ಕ್ಯೂಆರ್ ಕೋಡ್ ಮತ್ತು ಫೋನ್ಪೇ ಆ್ಯಪ್ ಅಪ್ಡೇಟ್ ಮಾಡಿಕೊಡುವುದಾಗಿ ನಂಬಿಸಿ, ಮಾಲೀಕರ ಅಕೌಂಟ್ನಲ್ಲಿದ್ದ 56 ಸಾವಿರ ರೂ. ಎಗರಿಸಿದ್ದಾನೆ. ಬಳಿಕ ಇದೇ ರಸ್ತೆಯಲ್ಲಿರುವ ಸೂರ್ಯ ಹಾರ್ಡ್ವೇರ್ ಎಂಬ ಅಂಗಡಿ ಮಾಲೀಕರ ಬಳಿಗೆ ಹೋಗಿ ಅವರ ಮೊಬೈಲ್ಫೋನ್ ಪಡೆದು 36 ಸಾವಿರ ರೂ. ಎಗರಿಸಿದ್ದಾನೆ. ಜತೆಗೆ ಮೊಬೈಲ್ ಅನ್ನೂ ದೋಚಿದ್ದಾನೆ.
ವಂಚನೆ ಕುರಿತು ದೂರು ಕೊಡಲು ಎರಡೂ ಅಂಗಡಿಗಳ ಮಾಲೀಕರು ಆನೇಕಲ್ ಠಾಣೆಗೆ ಹೋದಾಗ ಸಿಬ್ಬಂದಿ ಉಡಾಫೆ ಉತ್ತರ ಕೊಟ್ಟಿದ್ದಾರೆ. ಇದರಿಂದಾಗಿ ಮಾಲೀಕರು ಹಣ ಕಳೆದುಕೊಂಡು ಅಸಹಾಯಕರಾಗಿದ್ದಾರೆ.
ಇಂದಿನಿಂದ 3 ದಿನ ಕರ್ನಾಟಕದ ಹಲವೆಡೆ ಮಳೆ! ತಮಿಳುನಾಡು, ಕೇರಳದಲ್ಲೂ ಮಳೆ