ಬೆಂಗಳೂರು: ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಪರಸ್ಪರ ಕ್ಯೂಆರ್ ಕೋಡ್ ಸಹಿತ ಪೋಸ್ಟರ್ಗಳನ್ನು ತಯಾರಿಸಿ ಹೈಟೆಕ್ ಪ್ರಚಾರಕ್ಕೆ ಇಳಿದಿದ್ದ ಪ್ರಕರಣ ಗುರುವಾರ ಅಧಿವೇಶನಕ್ಕೂ ವ್ಯಾಪಿಸಿದೆ. ಕಾಂಗ್ರೆಸ್-ಬಿಜೆಪಿ ನಡುವಿನ ಆರೋಪ-ಪ್ರತ್ಯಾರೋಪ ಮುಂದುವರಿದಿದ್ದು, ಮೇಲ್ಮನೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಸದಸ್ಯರು ಪ್ಲೇಕಾರ್ಡ್ ಪ್ರದರ್ಶಶಿಸುತ್ತಾ ಇದು 40% ಸರ್ಕಾರ ಎಂದು ಧರಣಿ ನಡೆಸಿದರು. ಅತ್ತ ಬಿಜೆಪಿ ಸದಸ್ಯರೂ ಕಾಂಗ್ರೆಸ್ ವಿರುದ್ಧ ಏರು ಧ್ವನಿಯಲ್ಲಿ ಭ್ರಷ್ಟ-ಲೂಟಿಕೋರ ಪಕ್ಷವೆಂದು ಕೂಗಿದರು. ರಮೇಶ್ ಕುಮಾರ್ ಹೇಳಿದ್ದು ಸತ್ಯವೆಂದು ಕುಟುಕಿದರು. ‘40% ಸರ್ಕಾರ- ಬಿಜೆಪಿ ಅಂದ್ರೆ ಭ್ರಷ್ಟಾಚಾರ’ ಎಂಬ ಬರಹವುಳ್ಳ ಮಾಸ್ಕ್ ಧರಿಸಿ ಬಂದಿದ್ದ ಕಾಂಗ್ರೆಸ್ ಸದಸ್ಯರು ಬಿಜೆಪಿಯನ್ನ ಅಣಕಿಸಿದರು.
ಪರ-ವಿರೋಧದ ಧಿಕ್ಕಾರದ ಮಧ್ಯೆಯೂ ಪ್ರಶ್ನೋತ್ತರ ಕಲಾಪ ಮುಗಿಸಿ, ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ ಅಂಗೀಕಾರ ಪ್ರಕ್ರಿಯೆಯನ್ನು ಸಭಾಪತಿಗಳು ಮುಗಿಸಿದರು. ಕಾಂಗ್ರೆಸ್ನವರು ಸಭಾಪತಿ ಪೀಠದ ಹತ್ತಿರಕ್ಕೆ ಬಂದು ಮೇಜು ಬಡಿದು ತಗಾದೆ ತೆಗೆದರು. ಅಯೋಮಯ ಪರಿಸ್ಥಿತಿ ತಲೆದೋರಿದ ಬೆನ್ನಲ್ಲೇ ದಂಡ ನಾಯಕ, ಮಾರ್ಷಲ್ ಗಳು ಸದನ ಪ್ರವೇಶಿಸಿದರು. ಸಿಟ್ಟಿಗೆದ್ದ ಜೆಡಿಎಸ್ನ ಮರಿತಿಬ್ಬೇಗೌಡ, ಕುರ್ಚಿಯ ಮೇಲೆ ನಿಂತು ಆಕ್ರೋಶ ವ್ಯಕ್ತಪಡಿಸಿದರು.
‘ಪೇ ಸಿಎಂ ರೀತಿ ಹಾಕಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದನ್ನ ಯಾರೂ ಸಹಿಸಲು ಸಾಧ್ಯವಿಲ್ಲ. ನಾಳೆ ನನ್ನ ವಿರುದ್ಧ ‘ಪೇ ಭೋಜೇಗೌಡ’ ಎಂದು ಹಾಕಿದ್ರೆ ನನ್ನ ಮಾನ-ಮರ್ಯಾದೆ ವಿಚಾರ ಏನಾಗುತ್ತೆ? ನನ್ನ ಮನೆಯವರು, ಸ್ನೇಹಿತರು ಏನೆಂದುಕೊಳ್ಳುತ್ತಾರೆ. ಅದೇ ರೀತಿ ಮಾಜಿ ಸಿಎಂ ಸಿದ್ದರಾಮಯ್ಯ ನವರ ವಿರುದ್ಧವೂ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಪೋಸ್ಟ್ ಹಾಕಿದ್ದಾರೆ. ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಿ ಎಂದು ಜೆಡಿಎಸ್ನ ಭೋಜೇಗೌಡ ಆಗ್ರಹಿಸಿದರು.
ಸದನದ ಬಾವಿಗಿಳಿದು ಕಾಂಗ್ರೆಸ್ ಧರಣಿ ನಡೆಸುತ್ತಲೇ ಇತ್ತು. ಸಭಾಪತಿಗಳು ಮಧ್ಯಾಹ್ನ 3ಕ್ಕೆ ಕಲಾಪ ಮುಂದೂಡುತ್ತಿದ್ದಂತೆ ಬಿಜೆಪಿಯವರ ಗಮನ ನ್ಯೂಸ್ ಚಾನೆಲ್ ಕ್ಯಾಮೆರಾಗಳತ್ತ ಹೊರಳಿತು. ಕ್ಯಾಮೆರಾಗಳತ್ತ ಪ್ಲೇಕಾರ್ಡ್ ಪ್ರದರ್ಶಿಸಿ, ಕಾಂಗ್ರೆಸ್ ವಿರುದ್ಧ ಏರು ಧ್ವನಿಯಲ್ಲಿ ಭ್ರಷ್ಟ-ಲೂಟಿಕೋರ ಪಕ್ಷವೆಂದು ಕೂಗಿದರು. ರಮೇಶ್ ಕುಮಾರ್ ಹೇಳಿದ್ದು ಸತ್ಯವೆಂದು ಕುಟುಕಿದರು. ಕಾಂಗ್ರೆಸ್ನವರೂ ಚಾನೆಲ್ಗಳ ಮುಂದೆ ಪ್ಲೇಕಾರ್ಡ್ ಪ್ರದರ್ಶಿಸಿ ಬಿಜೆಪಿ ವಿರುದ್ಧ ಘೋಷಣೆ ಮೊಳಗಿಸುವ ಪೈಪೋಟಿಗೆ ಇಳಿದರು. ಮಾರ್ಷಲ್ಗಳು ಎಲ್ಲ ಸದಸ್ಯರ ಮನವೊಲಿಸಿ ಸಭಾಂಗಣದಿಂದ ಹೊರ ಕಳುಹಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ನೋಟಿಸ್ ಕೊಡಿ ಚರ್ಚೆಗೆ ಸಿದ್ಧ. ಇದೊಂದು ವಿಷಯವಲ್ಲ, 40 ಪರ್ಸೆಂಟ್, 100 ಪರ್ಸೆಂಟ್ ಎಲ್ಲವನ್ನೂ ಚರ್ಚಿಸಲು ನಾವು ಸಿದ್ಧ’ ಎಂದರು.
‘ಬಿಜೆಪಿ ಐದು ಕಡೆ ನೀಡಿದ ದೂರು ಆಧರಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ನೀವೂ ದೂರು ಕೊಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇರುವವರನ್ನು ಕೀಳುಮಟ್ಟದಲ್ಲಿ ಬಿಂಬಿಸುವವರನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದುಕೊಂಡಿರಲಿಲ್ಲ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
‘ದೂರು ಕೊಟ್ಟ ತಕ್ಷಣ ರಾತೋರಾತ್ರಿ ಬಂಧಿಸುವುದಕ್ಕೆ ಅವರೇನು ಟೆರರಿಸ್ಟ್ಗಳಾ?’ ಎಂದು ಹರಿಪ್ರಸಾದ್ ಪ್ರಶ್ನಿಸಿದರು. ಸದನದ ನಡವಳಿಕೆ ಪ್ರಕಾರ ಕಲಾಪಕ್ಕೆ ಅವಕಾಶ ಕೊಡಿ ಎಂದು ಸಭಾಪತಿ ಮಾಡಿದ ಮನವಿಗೆ ಕಾಂಗ್ರೆಸ್ ಸ್ಪಂದಿಸಲಿಲ್ಲ. ಬಿಜೆಪಿ ಆಕ್ಷೇಪದಿಂದ ಪ್ರತಿಭಟನೆಯ ತಿರುವು ಪಡೆಯಿತು. ಅಲ್ಲಿಗೆ ಕಲಾಪದ ಅರ್ಧದಿನ ಪ್ರತಿಭಟನೆಗೆ ಬಲಿಯಾಯಿತು.
ನಾಳೆ ಕಾಂಗ್ರೆಸ್ನ ಎಲ್ಲ ಶಾಸಕರು ಸೇರಿ ಸರ್ಕಾರಿ ಕಟ್ಟಡಗಳ ಮೇಲೆ ‘PAYCM’ ಪೋಸ್ಟರ್ ಅಂಟಿಸ್ತೀವಿ: ಡಿಕೆಶಿ
ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…
ಆನೇಕಲ್ನ ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರ ಶವ ಪತ್ತೆ! ಆ ದಿನ ನಡೆದಿದ್ದೇನು?