ಮೈಸೂರು: 24 ವರ್ಷದ ಯುವಕನೊಬ್ಬ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾನೆ. ಮಗನನ್ನು ಕಳೆದುಕೊಂಡ ನೋವಿನಲ್ಲೂ ಮಗನ ಅಂಗಾಂಗ ದಾನ ಮಾಡುವ ಮೂಲಕ ಐವರ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಸಾವಿನಲ್ಲೂ ಮಹಾನ್ ದಾನಿ ಆದವರ ಹೆಸರು ದರ್ಶನ್. ಜ.18ರಂದು ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ದರ್ಶನ್ ಅವರನ್ನು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸಲಿಲ್ಲ. ಅವರ ಮೆದುಳು ನಿಷ್ಕ್ರಿಯ (ಬೆನ್ಡೆಡ್) ಆಗಿತ್ತು. ಇನ್ನೆಂದೂ ಮಗ ಬದುಕಿ ಬರಲಾರ ಎಂಬ ವಿಷಯ ತಿಳಿದ ಪಾಲಕರ ಆಕ್ರಂದ ಮುಗಿಲು ಮುಟ್ಟಿತ್ತು. ನೋವಿನಲ್ಲೂ ದೃಢ ನಿರ್ಧಾರ ತೆಗೆದುಕೊಂಡ ಕುಟುಂಬಸ್ಥರು ಯುವಕನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಮೂಲತಃ ಗುಂಡ್ಲುಪೇಟೆಯ ದರ್ಶನ್, ಮೈಸೂರಿನ ಬೆಳವಾಡಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಇವರಿಗೆ ಎರಡು ತಿಂಗಳ ಮಗು ಇದೆ.
ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಿಂದ ಚೆನ್ನೈಗೆ ಯುವಕ ದರ್ಶನ್ರ ಜೀವಂತ ಹೃದಯವನ್ನು ಶುಕ್ರವಾರ ರವಾನೆ ಮಾಡಲಾಯಿತು. ಜೀರೋ ಟ್ರಾಫಿಕ್ ಮೂಲಕ ಮಧ್ಯಾಹ್ನ 2.20ಕ್ಕೆ ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್ 10 ನಿಮಿಷದಲ್ಲಿ ಮೈಸೂರು ವಿಮಾನ ನಿಲ್ದಾಣ ತಲುಪಿತು. ಇಲ್ಲಿಂದ ವಿಮಾನದ ಮೂಲಕ ಚೆನ್ನೈನ ಎಂಜಿಎಂ ಹೆಲ್ತ್ಕೇರ್ಗೆ ಹೃದಯವನ್ನು ಕಳುಹಿಸಲಾಯಿತು.
ಒಂದು ಕಿಡ್ನಿ ಮತ್ತು ಯಕೃತ್ ಅನ್ನು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲೇ ರೋಗಿಗಳಿಗೆ ಕಸಿ ಮಾಡಲಾಯಿತು. ಇನ್ನೊಂದು ಕಿಡ್ನಿಯನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಕಾರ್ನಿಯಾ ಅಂಗವನ್ನು ಮೈಸೂರಿನ ನೇತ್ರ ಬ್ಯಾಂಕ್ಗೆ ನೀಡಲಾಗಿದೆ ಎಂದು ಅಪೋಲೋ ಆಸ್ಪತ್ರೆಯ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್.ಜಿ.ಭರತೀಶ್ ರೆಡ್ಡಿ ತಿಳಿಸಿದ್ದಾರೆ.
ಪೂಜೆ ನೆಪದಲ್ಲಿ ಪುರೋಹಿತನನ್ನು ಮನೆಗೆ ಕರೆಸಿಕೊಂಡ ಈ ದಂಪತಿ ಅಸಹ್ಯ ಕೆಲಸ ಮಾಡಿಬಿಟ್ರು…
ಮನೆಗೆ ಹೋಗುವ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ನಿಂತ ಕ್ಷಣಾರ್ಧದಲ್ಲೇ ಸ್ನೇಹಿತರಿಬ್ಬರ ಪ್ರಾಣ ಹೊತ್ತೊಯ್ದ ಜವರಾಯ!