ಬೆಂಗಳೂರು: ಅಯ್ಯೋ ಪಾಪ ಎನಿಸಿ ಇಬ್ಬರು ಆತನನ್ನು ರಸ್ತೆ ಪಕ್ಕಕ್ಕೆ ಕರೆದೊಯ್ದು ಮಲಗಿಸಿ ಊಟ ಕೂಡ ಕೊಟ್ಟು ಹೋದರು. ಆದರೆ ಮತ್ತೊಬ್ಬ ಬಂದು ಬರ್ಬರವಾಗಿ ಕೊಲೆ ಮಾಡಿದ್ದಲ್ಲದೆ, ತಲೆ ಜಜ್ಜಿದ ಮೇಲೂ ಸತ್ತಿರಬಹುದಾ ಇಲ್ವೋ ಎಂದು ಪರೀಕ್ಷಿಸಿ ಪಾಪಿ ಎನಿಸಿಕೊಂಡು ಹೋದ. ಇಂಥದ್ದೊಂದು ಪ್ರಕರಣ ಬೆಂಗಳೂರಿನ ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಎಂಬಾತ ಕೊಲೆಗೀಡಾದ ವ್ಯಕ್ತಿ. ಆತನನ್ನು ಸೈಕೋ ಕಿಲ್ಲರ್ನಂತಿದ್ದ ವ್ಯಕ್ತಿಯೊಬ್ಬ ಕೊಲೆ ಮಾಡಿ ಹೋಗಿದ್ದಾನೆ. ಆ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೊಲೆ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.
ಮಾ. 14ರ ರಾತ್ರಿ ಪಾನಮತ್ತನಾಗಿದ್ದ ಸೆಕ್ಯುರಿಟಿ ಗಾರ್ಡ್ ಕೃಷ್ಣಪ್ಪನನ್ನು ಯಾರೋ ಇಬ್ಬರು ರಸ್ತೆ ಪಕ್ಕಕ್ಕೆ ಕರೆತಂದು ಅಂಗಡಿಯ ಮುಂಗಟ್ಟಿನ ಬಳಿ ಮಲಗಿಸಿ ಊಟ ಕೊಟ್ಟು ಹೋಗುತ್ತಾರೆ. ಬಳಿಕ 1.30ರ ಸುಮಾರಿಗೆ ಬರುವ ಗಡ್ಡಧಾರಿ ವ್ಯಕ್ತಿಯೊಬ್ಬ ಆತನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡುತ್ತಾನೆ. ಸತ್ತ ಮೇಲೂ ಸತ್ತನೋ ಇಲ್ವೋ ಎಂದು ಪರೀಕ್ಷಿಸುತ್ತಾನೆ. ಬಳಿಕ ಜೇಬಿನಲ್ಲಿ ತಡಕಾಡಿ ಸಿಕ್ಕಿದ್ದನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಹೋಳಿ ಆಡಲು ಹೋದವನಿಗೆ ಶಾಕ್; ಆಟಕ್ಕೂ ಮುನ್ನ ಪ್ರಾಣ ಕಳೆದುಕೊಂಡ ಬಾಲಕ..