ಮುಂಡಗೋಡ: ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಗಾತ್ರದ ಕಬ್ಬಿಣದ ಪೈಪ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದ ಸನಿಹದ ಬಂಕಾಪುರ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಬಂಕಾಪುರದಿಂದ ಬೃಹತ್ ಗಾತ್ರದ ಕಬ್ಬಿಣದ ಪೈಪ್ಗಳನ್ನು ಹೇರಿಕೊಂಡು ಮುಂಡಗೋಡನತ್ತ ಬರುತ್ತಿರುವಾಗ ಪಟ್ಟಣದ ಹೊರವಲಯದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಕಬ್ಬಿಣದ ಪೈಪ್ಗಳನ್ನು ಹೇರಿದ್ದ ಪರಿಣಾಮ ತಿರುವಿನಲ್ಲಿ ಚಿಕ್ಕ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ತಗ್ಗಿನಲ್ಲಿ ಉರುಳಿ ಬಿದ್ದಿದ್ದು ಲಾರಿ ಚಕ್ರಗಳು ಮೇಲಾಗಿ ಬಿದ್ದಿದೆ. ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸೇತುವೆ ಶಿಥಿಲ: ಲಾರಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಪರಿಣಾಮ ಲಾರಿಯಲ್ಲಿನ ಕಬ್ಬಿಣದ ಪೈಪ್ಗಳು ಸೇತುವೆಯ ಒಂದು ಬದಿಗೆ ಬಿದ್ದ ಪರಿಣಾಮ ತಡೆಗೋಡೆ ಹಾಗೂ ಕೇಳಭಾಗದಲ್ಲಿನ ಗೋಡೆಯ ಕಲ್ಲುಗಳು ಕಳಚಿ ಬಿದ್ದಿವೆ. ಇದರಿಂದ ಸೇತುವೆ ಶಿಥಿಲವಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಬಿ.ಎಸ್. ಲೋಕಾಪುರ ಪಿಎಸ್ಐ ಪರಶುರಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.