ಬೆಂಗಳೂರು: ಸೈಬರ್ ಕಳ್ಳರಿಗೆ ವಂಚನೆ ಮಾಡಲು ಇದೀಗ ನಿಮ್ಮ ಬ್ಯಾಂಕ್ನಲ್ಲಿ ಹಣ ಇರಬೇಕಿಲ್ಲ. ಬದಲಿಗೆ ಆಧಾರ್, ಪಾನ್ ನಕಲು ಮತ್ತು ಮೊಬೈಲ್ಗೆ ಬರುವ ಒಟಿಪಿ ಕೊಟ್ಟರೇ ಸಾಕು ನಿಮಗೇ ಗೊತ್ತಿಲ್ಲದೆ ನಿಮ್ಮ ಹೆಸರಿನಲ್ಲಿ ಸಾಲ ಮಂಜೂರು ಮಾಡಿಸಿಕೊಂಡು ತಮ್ಮ ಖಾತೆಗೆ ಜಮೆ ಮಾಡಿಕೊಂಡು ಕ್ಷಣಾರ್ಧದಲ್ಲಿ ವಂಚನೆ ಮಾಡಲಿದ್ದಾರೆ. ಆಧಾರ್, ಒಟಿಪಿ ಮತ್ತು ಬೆರಳಚ್ಚು ಕೊಡುವ ಮುನ್ನ ಎಚ್ಚರ!
ಮೊಬೈಲ್ಗೆ ಕರೆ ಮಾಡಿ ಆ್ಯಪ್ ಡೌನ್ಲೋಡ್ ಮಾಡಿಸಿ ಸಾಲ ಕೊಟ್ಟು ದುಬಾರಿ ಬಡ್ಡಿ ವಸೂಲಿ ಮಾಡುವ ಗ್ಯಾಂಗ್ ಒಂದು ಕಡೆಯಾದರೆ. ಮತ್ತೊಂದೆಡೆ ಆತ್ಮೀಯವಾಗಿ ವರ್ತಿಸಿ ಮೋಸ ಮಾಡುವ ಸೈಬರ್ ಕಳ್ಳರು ಸುತ್ತಮುತ್ತಲೇ ಇದ್ದಾರೆ. ಇಂತಹದೊಂದು ಕಳ್ಳಾಟಕ್ಕೆ ಬಿಎಂಟಿಸಿ ನಿರ್ವಾಹಕ ಒಳಗಾಗಿದ್ದಾರೆ. 1 ಲಕ್ಷ ರೂಪಾಯಿ ಸಾಲಗಾರನಾಗಿ ಕೊನೆಗೆ ದಿಕ್ಕು ತೋಚದೆ ಪಶ್ಚಿಮ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಆರೋಪಿ ಪುಟ್ಟರಾಜು ಎಂಬಾತನ ವಿರುದ್ಧ ಎ್ಫ್ಐಆರ್ ದಾಖಲಿಸಿಕೊಂಡು ಸೈಬರ್ ಪೊಲೀಸರು ವಂಚಕನ ಬಂಧನಕ್ಕೆ ಬಲೆಬೀಸಿದ್ದಾರೆ.
ಕನಕನಗರದ ಬಿಎಂಟಿಸಿ ಬಸ್ ನಿರ್ವಾಹಕ, ಕರ್ತವ್ಯ ನಿರ್ವಹಿಸಬೇಕಾದರೆ ಪ್ರಯಾಣಿಕನ ಸೋಗಿನಲ್ಲಿ ಬಂದ ಪುಟ್ಟರಾಜು ಕಂಡಕ್ಟರ್ ಅನ್ನು ಪರಿಚಯ ಮಾಡಿಕೊಂಡಿದ್ದಾನೆ. ಪ್ರತಿದಿನ ಬಸ್ಗೆ ಬರುತ್ತಿದ್ದ ಕಾರಣ ನಿರ್ವಾಹಕ ಸಹ ಪುಟ್ಟರಾಜು ಬಳಿ ಆತ್ಮೀಯತೆ ಬೆಳೆಸಿದ್ದರು.
ನಿರ್ವಾಹಕನ ಆರ್ಥಿಕ ಸಂಕಷ್ಟ ತಿಳಿದ ಪುಟ್ಟರಾಜು ಸುಲಭವಾಗಿ 1 ಲಕ್ಷ ರೂ. ಸಾಲ ಕೊಡಿಸುವುದಾಗಿ ನಂಬಿಸಿದ್ದಾನೆ. ಅದಕ್ಕೆ ಒಪ್ಪಿದಾಗ ನಿರ್ವಾಹಕನ ಮೊಬೈಲ್ ಪಡೆದು ಅದರಲ್ಲಿದ್ದ ಆಧಾರ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಫೋಟೋಗಳನ್ನು ತನ್ನ ಮೊಬೈಲ್ಗೆ ಕಳುಹಿಸಿಕೊಂಡಿದ್ದಾನೆ. ಆನಂತರ ನಿರ್ವಾಹಕನ ಮೊಬೈಲ್ಗೆ ಬಂದ ಒಟಿಪಿ ಸಹ ಪಡೆದುಕೊಂಡಿದ್ದಾನೆ.
ಸ್ವಲ್ಪ ಸಮಯದ ಬಳಿಕ ನಿಮ್ಮ ಮೊಬೈಲ್ನಲ್ಲಿ ಇಂಟರ್ನೆಟ್ ಸರಿಯಾಗಿ ಕನೆಕ್ಟ್ ಆಗುತ್ತಿಲ್ಲ. ನಾಳೆ ಬಂದು ಸಾಲ ಕೊಡಿಸುತ್ತೇನೆ ಎಂದು ಹೇಳಿ ಅಲ್ಲಿಂದ ಪುಟ್ಟರಾಜು ಹೋಗಿದ್ದಾನೆ. ಮರು ದಿನ ಪುಟ್ಟರಾಜು ಬಸ್ಗೆ ಬಂದಿಲ್ಲ. ಇದಾದ ಮೇಲೆ ಮೊಬೈಲ್ಗೆ ಬಂದಿರುವ ಸಂದೇಶಗಳನ್ನು ಪರಿಶೀಲನೆ ನಡೆಸಿದಾಗ ನಿರ್ವಾಹಕನ ಹೆಸರಿನಲ್ಲಿ 1 ಲಕ್ಷ ರೂ. ಸಾಲ ಮಂಜೂರಾಗಿ ಡ್ರಾ ಆಗಿರುವುದು ಬೆಳಕಿಗೆ ಬಂದಿದೆ. ಆರೋಪಿಯ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುವುದು ತಿಳಿದು ಕೊನೆಗೆ ನಿರ್ವಾಹಕ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.