ಅಂಕೋಲಾ: ಈಡಿಗ ನಿಗಮ ರಚಿಸುವಂತೆ ಪ್ರಣವಾನಂದ ಸ್ವಾಮೀಜಿ ಅವರು ನಿರಂತರ ಹೋರಾಟ ಮಾಡುತ್ತಿದ್ದು, ಸರ್ಕಾರ ಜುಲೈ 5 ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತ್ತು. ಆದರೆ, ಇಲ್ಲಿಯರೆಗೂ ಯಾವುದೇ ಕ್ರಮ ಕೈಗೊಳ್ಳದ್ದರಿಂದ ಜು. 29 ಹಾಗೂ 30ರಂದು ಮುಖ್ಯಮಂತ್ರಿ ಬಳಿ ನಿಯೋಗ ತೆರಳುವ ಹಿನ್ನೆಲೆಯಲ್ಲಿ ಶ್ರೀ ನಾರಾಯಣ ಗುರು ವೇದಿಕೆ ಹೋರಶ್ರಕ್ಕೆ ಸಾಥ್ ನೀಡಿ ಬುಧವಾರ ಪಟ್ಟಣದ ಅಂಚೆ ಕಚೇರಿ ಎದುರು ಪತ್ರ ಚಳವಳಿ ನಡೆಸಿತು.
ವೇದಿಕೆಯ ಅಧ್ಯಕ್ಷ ನಾಗರಾಜ ಮಂಜಗುಣಿ ಮಾತನಾಡಿ, ರಾಜ್ಯದಲ್ಲಿ 70 ಲಕ್ಷಕ್ಕೂ ಅಧಿಕ ಈಡಿಗ ಸಮುದಾಯದವರಿದ್ದಾರೆ. ಇವರಲ್ಲಿ ಕೆಲವೇ ಕೆಲವರು ಶ್ರೀಮಂತರಿದ್ದು, ಉಳಿದವರು ಬಡವರಾಗಿದ್ದಾರೆ. ಹೀಗಾಗಿ ಈಡಿಗ ನಿಗಮ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ನಾಮಧಾರಿ ಸಮಾಜದ ಮುಖಂಡ ದಾಮೋಧರ ಜಿ. ನಾಯ್ಕ ಮಾತನಾಡಿ, ಈಡಿಗ ನಿಗಮ ರಚನೆಯಾದರೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಕೇವಲ ರಾಜಕಾರಣಿಗಳು, ಸ್ವಾಮೀಜಿಗಳು ಮಾತ್ರ ಹೋರಾಡುವುದಲ್ಲ. ಬದಲಿಗೆ ಸಮಾಜದ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು ಎಂದರು.
ಮುಖ್ಯಮಂತ್ರಿ ಅವರ ವಿಳಾಸಕ್ಕೆ ನಿಗಮ ಮಂಡಳಿ ರಚಿಸುವ ಕುರಿತು ಹಕ್ಕೊತ್ತಾಯಿಸಿ ಅಂಚೆ ಪೆಟ್ಟಿಗೆಗೆ ಪತ್ರಗಳನ್ನು ಹಾಕಲಾಯಿತು. ವೇದಿಕೆಯ ಕಾರ್ಯದರ್ಶಿ ಮಂಜುನಾಥ ಕೆ. ನಾಯ್ಕ, ಮಂಜುನಾಥ ಡಿ. ನಾಯ್ಕ, ಎಂ.ಎಂ. ರ್ಕಕರ, ಗೋವಿಂದ್ರಾಯ ನಾಯ್ಕ, ಪಾಂಡು ನಾಯ್ಕ, ಮೋಹನ ನಾಯ್ಕ, ರಾಘು ಕಾಕರಮಠ, ವಿಶ್ವನಾಥ ನಾಯ್ಕ, ಸುರೇಶ ನಾಯ್ಕ ಇದ್ದರು.