ಚನ್ನರಾಯಪಟ್ಟಣ: ತಾಲೂಕಿನ ದಿಂಡಗೂರು ಸಾತೇನಹಳ್ಳಿ ಗ್ರಾಮದಲ್ಲಿನ ಶಂಕರೇಗೌಡ ಎಂಬುವವರಿಗೆ ಸೇರಿದ ಶೆಡ್ನಲ್ಲಿ ನಾಟಿಕೋಳಿಗಳನ್ನು ತಿನ್ನಲು ಬಂದ ಚಿರತೆಯೊಂದು ಹಿಂದಿರುಗಿ ಹೋಗಲಾಗದೆ ಶೆಡ್ನಲ್ಲೇ ಬಂಧಿಯಾಗಿದೆ.
ದಿಂಡಗೂರು ಸಾತೇನಹಳ್ಳಿಯ ಶಂಕರೇಗೌಡರು ತೋಟದ ಮನೆಯಲ್ಲಿ ವಾಸವಿದ್ದು, ಸ್ಪಲ್ಪ ದೂರದಲ್ಲಿ ಶೆಡ್ ನಿರ್ಮಿಸಿ ನಾಟಿ ಕೋಳಿ ಸಾಕುತ್ತಿದ್ದರು. ಆಹಾರ ಹುಡುಕಿ ಬಂದ ಚಿರತೆ ಭಾನುವಾರ ರಾತ್ರಿ ಶೆಡ್ಗೆ ನುಗ್ಗಿದೆ. ಮರುದಿನ ಬೆಳಗ್ಗೆ ರೈತ ಶಂಕರೇಗೌಡ ಶೆಡ್ ಬಳಿ ಬಂದು ನೋಡಲಾಗಿ ಚಿರತೆ ಶೆಡ್ನಲ್ಲಿ ಹೊರಹೋಗಲಾಗದೆ ಒಂದು ಮೂಲೆಯಲ್ಲಿ ಬೀಡುಬಿಟ್ಟಿದೆ. ಶೆಡ್ನಲ್ಲಿದ್ದು 100ಕ್ಕೂ ಹೆಚ್ಚು ಕೋಳಿಗಳನ್ನು ಸಾಯಿಸಿದೆ. ಶೆಡ್ನ ಸುತ್ತಲೂ ಮೆಶ್ ಹಾಕಿದ್ದ ಹಿನ್ನೆಲೆಯಲ್ಲಿ ಹೇಗೂ ಒಳ ಬಂದ ಚಿರತೆ ಹೊರ ಹೋಗಲಾಗಿಲ್ಲ, ತಕ್ಷಣ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಡಿಸಿಎಫ್ ಮೋಹನ್ಕುಮಾರ್ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಮಹೇಶ್, ಮಂಜುನಾಥ್, ಅರಣ್ಯ ರಕ್ಷಕ ಶಿವಕುಮಾರ್ ಹಾಗೂ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೋನಿಟ್ಟು ಚಿರತೆಯ ಸೆರೆಗೆ ಮುಂದಾಗಿದ್ದಾರೆ.
ವಲಯ ಅರಣ್ಯ ಅಧಿಕಾರಿ ಪಲ್ಲವಿ ಮಾತನಾಡಿ, ಶೆಡ್ನ ಬಾಗಿಲು ದೊಡ್ಡದಿರುವ ಕಾರಣ, ಇರುವ ಚಿಕ್ಕ ಬೋನಿನ ಬದಲಾಗಿ ದೊಡ್ಡ ಬೋನು ಇರಿಸಿ ಚಿರತೆ ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದರು.