ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತನ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಐಟಿ ದಾಳಿಯಾಗಿದ್ದು, ಮಹತ್ವದ ದಾಖಲೆಗಳಿಗಾಗಿ ಅಧಿಕಾರಿಗಳ ಹುಡುಕಾಟ ಮುಂದುವರಿದಿದೆ.
ಬಿಎಸ್ವೈ ಆಪ್ತ ಉಮೇಶ್ ವಾಸವಿದ್ದ ರಾಜಾಜಿನಗರ ಬಾಷ್ಯಂ ಸರ್ಕಲ್ ಬಳಿ ಮೂರಂತಸ್ತಿನ ಮನೆ ಸೇರಿ ಅವರಿಗೆ ಸಂಬಂಧಿಸಿದ 4 ಕಡೆ ಏಕಕಾಲಕ್ಕೆ ಐಟಿ ದಾಳಿಯಾಗಿದೆ. ಬಿಎಸ್ವೈ ಸಿಎಂ ಆಗಿದ್ದಾಗ ಪಿಎ ಆಗಿದ್ದ ಉಮೇಶ್, ಅದಕ್ಕೂ ಮುನ್ನ ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಬಸ್ ಡಿಪೋದಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಕಂ ಡ್ರೈವರ್ ಆಗಿದ್ದರು. ಈ ಹಿಂದೆ ಬಿಎಸ್ವೈ ಸರ್ಕಾರದ ವೇಳೆ ವಿಆರ್ಎಸ್ ಪಡೆದುಕೊಂಡಿದ್ರು ಎನ್ನಲಾಗುತ್ತಿದೆ. ಡೆಫ್ಯುಟೇಷನ್ ಮೇಲೆ ಬಿಎಸ್ವೈ ಆಪ್ತನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಬಾಷ್ಯಂ ಸರ್ಕಲ್ ಬಳಿ 10 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇದೇ ಮನೆ ಮೇಲೆ ಗುರುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ, ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಮೂಲದ ಉಮೇಶ್ 2008ರಿಂದಲೂ ಯಡಿಯೂರಪ್ಪ ಜತೆ ಆಪ್ತ ಒಡನಾಟ ಇಟ್ಟುಕೊಂಡಿದ್ದಾರೆ. ಕಡತ ವಿಲೇವಾರಿ, ವರ್ಗಾವಣೆಯಂತಹ ಕೆಲಸಗಳ ಜತೆಗೆ ನೀರಾವರಿ ಇಲಾಖೆಯ ವ್ಯವಹಾರವನ್ನ ಉಮೇಶ್ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಇದೆ. ಯಡಿಯೂರಪ್ಪ ಮಾತ್ರವಲ್ಲ, ಸಂಸದ ರಾಘವೇಂದ್ರ, ಬಿ.ವೈ. ವಿಜಯೇಂದ್ರ ಅವರಿಗೂ ಪಿಎ ರೀತಿ ಉಮೇಶ್ ಕೆಲಸ ಮಾಡುತ್ತಿದ್ದರು. ಬಿಎಸ್ವೈ ಮನೆ ಮತ್ತು ಕಚೇರಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಈಗಲೂ ಸರ್ಕಾರಿ ಕಾರು ಬಳಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ರಾಮಕೃಷ್ಣ ಹೆಗಡೆ ನಗರದ ಚಾರ್ಟೆಡ್ ಅಕೌಂಟೆಡ್ ಅಮಲಾ ಎಂಬುವರ ಮನೆ ಸೇರಿ 15ಕ್ಕೂ ಉದ್ಯಮಿಗಳು ಮತ್ತು ಚಾರ್ಟೆಡ್ ಅಕೌಂಟ್ ಮನೆಗಳ ಮೇಲೂ ಐಟಿ ದಾಳಿ ಆಗಿದೆ.
ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ಕೋಮುಗಲಭೆ ಆಗಿಲ್ಲ, ಕುರ್ಚಿಗೋಸ್ಕರ ಬೆಂಕಿ ಹಚ್ಚಿದ್ದು ಕಾಂಗ್ರೆಸ್: ರೇಣುಕಾಚಾರ್ಯ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಐಟಿ ಅಧಿಕಾರಿಗಳು: ಗುತ್ತಿಗೆದಾರರು, ಉದ್ಯಮಿ ಮನೆಗಳ ಮೇಲೆ ದಾಳಿ