ಬೆಂಗಳೂರು: ಕಲಾಪ ನಡೆಸಲು ದಿನಕ್ಕೆ ಸುಮಾರು 2 ಕೋಟಿ ರೂ. ಖರ್ಚಾಗುತ್ತೆ. ಕಾಂಗ್ರೆಸ್ ಪ್ರತಿಷ್ಠೆಗೆ ಬಿದ್ದು ಕಲಾಪವನ್ನು ಹಾಳು ಮಾಡುತ್ತಿದೆ. ಕಲಾಪವನ್ನು ಹಾಳು ಮಾಡುತ್ತಿರುವವರನ್ನು ಕೂಡಲೇ ಸದನದಿಂದ ಹೊರಹಾಕಿ. ಕಲಾಪ ನಡೆಸುವ ಶಕ್ತಿ ಸರ್ಕಾರಕ್ಕೆ ಇಲ್ಲದಿದ್ದರೆ ಕಲಾಪವನ್ನು ಅನಿದಿರ್ಷ್ಟಾವಧಿಗೆ ಮುಂದೂಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸುಖಾ ಸುಮ್ಮನೆ ದಿನಕ್ಕೆ ಒಂದೂವರೆಯಿಂದ ಎರಡು ಕೋಟಿ ರೂಪಾಯಿ ಜನರ ತೆರಿಗೆ ಹಣವನ್ನು ಏಕೆ ಪೋಲು ಮಾಡುತ್ತೀರಿ? ಕೇವಲ ಟಿಎ, ಡಿಎ ಪಡೆಯಲು ಕಲಾಪ ನಡೆಸಬೇಡಿ. ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎನ್ನುವುದು ಬಿಜೆಪಿ ಹಾಗೂ ಸಂಘ ಪರಿವಾರದ ಮಹದಾಸೆ. ಅವರ ಅಜೆಂಡಾ ಕೂಡ ಅದೇ. ಆ ಹಿನ್ನೆಲೆಯೊಳಗೆ ಸಚಿವ ಈಶ್ವರಪ್ಪ ಅವರು ಮುಂದೊಂದು ದಿನ ಕೆಂಪುಕೋಟೆ ಮೇಲೂ ಕೇಸರಿ ಭಾವುಟವನ್ನು ಯಾರಾದರೂ ಹಾರಿಸಬಹುದು ಎಂದು ಹೇಳಿದ್ದರು. ಹೀಗಿದ್ದರೂ ಕಾಂಗ್ರೆಸ್ ಪ್ರತಿಷ್ಠೆಗೆ ಬಿದ್ದು ಕಲಾಪವನ್ನು ಹಾಳು ಮಾಡುತ್ತಿದೆ ಎಂದು ಎಚ್ಡಿಕೆ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕ ಸೇರಿ ದಕ್ಷಿಣದ ಎಲ್ಲ ರಾಜ್ಯಗಳಲ್ಲಿಯೂ ಧ್ವಜ ಸ್ತಂಭಗಳನ್ನು ನೆಡುವ, ಅವುಗಳಲ್ಲಿ ತಮ್ಮ ಸಂಘಟನೆಗಳ ಬಾವುಟ ಹಾರಿಸುವುದು ಇದೆ. ನಮ್ಮಲ್ಲೂ ಕನ್ನಡ ಸಂಘಟನೆಗಳು ಕನ್ನಡ ಭಾವುಟವನ್ನು ಹಾರಿಸುತ್ತವೆ. ತಮಿಳುನಾಡಿನಲ್ಲಿಯೂ ಇಂಥ ದೃಶ್ಯಗಳನ್ನು ಕಾಣಬಹುದು. ಖಾಲಿ ಇರುವ ಧ್ವಜ ಸ್ತಂಭಗಳಲ್ಲಿ ಕೇಸರಿ ಬಾವುಟ ಹಾರಿಸುವುದನ್ನು ನೋಡಿದ್ದೇವೆ. ಈ ವಿಷಯವನ್ನು ದೊಡ್ಡದು ಮಾಡಿ ಸದನದ ಕಲಾಪವನ್ನು ಹಾಳು ಮಾಡುವುದು ಎಷ್ಟು ಸರಿ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಒಬ್ಬ ಮಂತ್ರಿ ಸ್ಥಾನದ ವಿಚಾರ ಇಟ್ಟುಕೊಂಡು ಕಲಾಪ ಹಾಳು ಮಾಡುತ್ತಿದ್ದಾರೆ. ಯಾವ ವಿಷಯಕ್ಕೆ ಪ್ರಾತಿನಿಧ್ಯ ಕೊಡಬೇಕು ಅದನ್ನ ಕೊಡುತ್ತಿಲ್ಲ. ಅವರ ವೈಯುಕ್ತಿಕ ಪ್ರತಿಷ್ಠೆಗೆ ಕಲಾಪ ಹಾಳಾಗುತ್ತಿದೆ ಎಂದಿರುವ ಎಚ್ಡಿಕೆ, ರಾಜ್ಯದಲ್ಲಿ ಹಿಜಾಬ್ ವಿವಾದ ತಣ್ಣಗಾಗುತ್ತಿಲ್ಲ. ನಮಗೆ ನಾಡಿನ ಜನರ ಬದುಕು ಮುಖ್ಯ. ಯಾವ ಜಾತಿಯ ಜನರಿರಲಿ, ಜನರ ಬದುಕು ಮುಖ್ಯ. ನಾಡಿನಲ್ಲಿ ಶಾಂತಿ ವಾತಾವರಣ ಹಾಳು ಮಾಡಬಾರದು ಎಂದಿದ್ದಾರೆ.
ಕಾಂಗ್ರೆಸ್ ಅಹೋರಾತ್ರಿ ಧರಣಿ: ವಿಧಾನಸೌಧ ಆವರಣದಲ್ಲೇ ವಾಕಿಂಗ್, ದಿನ ಪತ್ರಿಕೆ ಓದು
ವಿಜಯಪುರದಲ್ಲಿ ಹಾಡಹಗಲೇ ಪಿಎಸ್ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್