ಬೆಂಗಳೂರು: ಫೆ.14ರಿಂದ ವಿಧಾನ ಮಂಡಲದ ಅಧಿವೇಶ ಆರಂಭವಾಗುತ್ತಿದ್ದು, ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶನಿವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಫೆ.14ರಂದು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಹ್ವಾನ ನೀಡಿದರು.
ಬಳಿಕ ವಿಧಾನಮಂಡಲ ಅಧಿವೇಶನ ತಯಾರಿ ಬಗ್ಗೆ ಸಭಾಧ್ಯಕ್ಷರು ಹಾಗೂ ಸಭಾಪತಿಗಳು ಪರಿಶೀಲನೆ ನಡೆಸಿದರು. ಮುಖ್ಯವಾಗಿ ಕರೊನಾ ಕಾರಣಕ್ಕೆ ಕಲಾಪ ವೀಕ್ಷಣೆಗೆ ಸಾರ್ವಜನಿಕರ ವೀಕ್ಷಣೆಗಿದ್ದ ನಿರ್ಬಂಧವನ್ನು ಈ ಬಾರಿ ಸಡಿಲಿಸಲಾಗಿದೆ. ಸೂಕ್ತ ಅನುಮತಿಯೊಂದಿಗೆ ಮತ್ತು ಕೋವಿಡ್ ನಿಯಮ ಪಾಲಿಸಿ ಕಲಾಪ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿದೆ.
ಇನ್ನು ರಾಜ್ಯಪಾಲರು ಭಾಷಣಕ್ಕಾಗಿ ವಿಧಾನಸೌಧ ಪ್ರವೇಶಿಸುವ ದಾರಿ ಈ ಬಾರಿ ಬದಲಾಗುತ್ತಿದೆ. ಅಂದರೆ ಕೆಂಗಲ್ ಹನುಮಂತರಾಯರ ಪ್ರತಿಮೆ ಬಳಿಯಿಂದ ಆಗಮಿಸುವ ಬದಲು ಪ್ರಧಾನ ಮೆಟ್ಟಿಲ ಬಳಿ ಗೌರವ ಸ್ವೀಕರಿಸಿ ವಿಧಾನಸಭೆ ಪ್ರವೇಶಿಸುವರು. ಬಹಳ ವರ್ಷಗಳಹಿಂದೆ ಇದೇ ಹಾದಿಯಲ್ಲಿ ರಾಜ್ಯಪಾಲರ ಆಗಮನವಾಗುತ್ತಿತ್ತು. ಆದರೆ ವಿವಿಧ ಕಾರಣಗಳಿಂದ ನಿಂತು ಹೋಗಿತ್ತು. ಈ ಬಾರಿ ಹಳೆಯ ಸಂಪ್ರದಾಯ ಪುನರಾರಂಭಿಸಲಾಗುತ್ತಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಕಾಗೇರಿ, ಅಧಿವೇಶನದ ಎಲ್ಲ ತಯಾರಿ ನಡೆದಿದೆ, ಸದಸ್ಯರಿಂದ ಈ ಬಾರಿ ಎರಡು ಸಾವಿರ ಪ್ರಶ್ನೆಗಳು ಬಂದಿವೆ. ಸದ್ಯ ಮಂಡನೆಗಾಗಿ ಎರಡು ವಿಧೇಯಕ ನಮ್ಮ ಕಚೇರಿಗೆ ಬಂದಿದೆ. ಉಳಿದಂತೆ ಕಳೆದ ಬಾರಿಯ ವ್ಯವಸ್ಥೆ ಮುಂದುವರಿಯಲಿದೆ ಎಂದರು. ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತು ಎರಡು ದಿನ ಚರ್ಚೆ ಆಗಬೇಕೆಂಬ ಅಪೇಕ್ಷೆ ಇದೆ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದರು.
ಹಿಜಾಬ್ ವಿವಾದ ದೇಶವನ್ನಷ್ಟೇ ಅಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ. ಕೋರ್ಟ್ ಮಧ್ಯಂತರ ಆದೇಶ ಕೊಟ್ಟಿರುವುದರಿಂದ ಅದರಂತೆ ಎಲ್ಲರೂ ಚಟುವಟಿಕೆ ನಡೆಸಬೇಕು. ಅನಗತ್ಯ ಗೊಂದಲ ಸೃಷ್ಟಿಸಬಾರದು ಎಂದು ಸ್ಪೀಕರ್ ಮನವಿ ಮಾಡಿದರು.
ನೀಟ್ ಪರೀಕ್ಷೆ ವಿಳಂಬ, ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ದಂಡ ಶುಲ್ಕ ರದ್ದು: ಸಚಿವ ಡಾ. ಅಶ್ವತ್ಥನಾರಾಯಣ
ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕ: ಅರ್ಜಿಯಲ್ಲಿನ ತಪ್ಪು ಸರಿಪಡಿಸಲು 2 ದಿನ ಅವಕಾಶ