ಜೊಯಿಡಾ: ಇಲ್ಲಿನ ಕುಣಬಿ ಸಮಾಜ ಭವನದಲ್ಲಿ ಬುಧವಾರ ಆಯೋಜಿಸಿದ್ದ ಗಡ್ಡೆಗೆಣಸು ಮೇಳಕ್ಕೆ ಉತ್ತಮ ಸ್ಪಂದನೆ ದೊರೆಯಿತು. ಬೃಹತ್ ಪ್ರಮಾಣದ, ಅಪರೂಪದ ಗಡ್ಡೆ, ಗೆಣಸುಗಳು ಜನರ ಗಮನ ಸೆಳೆದವು.
ಕುಣಬಿ ಅಭಿವೃದ್ಧಿ ಸಂಘ, ಕುಂಬಾರವಾಡದ ಕಾಳಿ ರೈತ ಉತ್ಪಾದಕರ ಕಂಪನಿ, ಹಾಗೂ ತಾಲೂಕು ಗೆಡ್ಡೆ ಗೆಣಸು ಸಂಘದಿಂದ ಆಯೋಜಿಸಿದ್ದ ಗಡ್ಡೆ-ಗೆಣಸುಗಳ ಪ್ರದರ್ಶನ, ಸ್ಪರ್ಧೆ ಮತ್ತು ಮಾರಾಟ ಮೇಳದಲ್ಲಿ ತಾಲೂಕಿನ 169 ರೈತರು ಭಾಗವಹಿಸಿದ್ದರು.
ಮೇಳದಲ್ಲಿ ಜಿಲ್ಲೆಯವರು ಮಾತ್ರವಲ್ಲದೆ, ಬೆಳಗಾವಿ, ಮೈಸೂರು, ದಾವಣಗೆರೆ, ಧಾರವಾಡ, ರಾಯಚೂರು, ತುಮಕೂರು ಹಾಗೂ ಹಾವೇರಿ ಸೇರಿ ಹೊರ ಜಿಲ್ಲೆಗಳಿಂದ ಅಷ್ಟೇ ಅಲ್ಲದೆ, ಮಹಾರಾಷ್ಟ್ರಗೋವಾ ರಾಜ್ಯಗಳಿಂದಲೂ ಆಸಕ್ತರು ಆಗಮಿಸಿ ನೂರಾರು ಪ್ರಭೇದಗಳ ಅಪರೂಪದ ಗಡ್ಡೆಗಳನ್ನು ವೀಕ್ಷಿಸಿದರು. ಅವುಗಳಿಂದ ಮಾಡಿದ ಖಾದ್ಯಗಳನ್ನು ಸವಿದರು, ಖರೀದಿಸಿದರು.
ಮೇಳದಲ್ಲಿ 4 ಲಕ್ಷ ರೂಗಿಂತ ಅಧಿಕ ಮೌಲ್ಯದ ವಹಿವಾಟು ಬುಧವಾರ ನಡೆಯಿತು.
ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಾರಿಯಾ ಕ್ರೈಸ್ತರಾಜು ಮೇಳಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ತಜ್ಞ ಮಹಾದೇವ ವೇಳಿಪ, ಕಾಳಿ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಶಾಂತಾರಾಮ ಕಾಮತ್, ಕುಣಬಿ ಅಭಿವೃದ್ಧಿ ಸಂಘದ ಅಧ್ಯಕ್ಷ ಅಜಿತ್ ಮೀರಾಶಿ , ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸಂತೋಷ್, ಅಣಶಿ ಸಹಾಯಕ ಅರಣ್ಯ ಸಂರಕ್ಷಣಾಕಾರಿ ಶಿವಾನಂದ ತೋಡ್ಕರ್. ಸುಮೀತ್ ಕೌರ್ ಅಮೃತ ಜೋಶಿ ವೇದಿಕೆಯಲ್ಲಿದ್ದರು.