ಸಿದ್ದಾಪುರ: ಕಡಿಮೆ ಅವಧಿಯಲ್ಲಿ ಹೆಚ್ಚು ಸಂಪಾದಿಸುವ ಉದ್ದೇಶ ಹಾಗೂ ಐಷಾರಾಮಿ ಜೀವನ ಮಾಡುವ ಮನೋಭಾದಿಂದ ಇಂದು ಯುವಕರು ಅಡ್ಡ ದಾರಿ ಹಿಡಿಯುತ್ತಿದ್ದಾರೆ. ಮನಸಿನ ನಿರ್ಧಾರದ ಮುಂದೆ ಯಾವುದೂ ಇಲ್ಲ, ನಾವು ದೃಢವಾಗಿ ನಿರ್ಧಾರ ಮಾಡಿದರೆ ಗುರಿ ತಲುಪಬಹುದು ಮತ್ತು ವ್ಯಸನಗಳಿಂದ ಹೊರ ಬರಲು ಸಾಧ್ಯ ಎಂದು ರಾಜಯೋಗಿನಿ ಬಿ.ಕೆ. ವೀಣಾಜಿ ಹೇಳಿದರು.
ಪಟ್ಟಣದ ಹೊಸೂರಿನಲ್ಲಿರುವ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಮೃದ್ಧ ಭಾರತ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ’ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಅಂಬೇಡ್ಕರ್ ಶಕ್ತಿ ಸಂಘದ ಅಧ್ಯಕ್ಷ ನಂದನ್ ಬೋರ್ಕರ್, ಇಂದಿನ ಯುವ ಸಮಾಜ ದುಶ್ಚಟಗಳಿಗೆ ಬಲಿಯಾಗುತ್ತಿರುವುದರಿಂದ ದೇಶದ ಅಭಿವೃದ್ಧಿಗೆ ಮಾರಕ ಮತ್ತು ಅವರ ಆರೋಗ್ಯಕ್ಕೂ ತೊಂದರೆ ಆಗುತ್ತದೆ. ದುಡಿದು ತಂದೆ- ತಾಯಿಗಳನ್ನು ಸಾಕಬೇಕಾದ ಮಕ್ಕಳು ಸಣ್ಣ ತಪ್ಪಿನಿಂದಾಗಿ ಕೈತಪ್ಪಿ ಹೋದರೆ ಅವರನ್ನು ಮತ್ತೆ ಒಳ್ಳೆಯ ಮಾರ್ಗಕ್ಕೆ ತರುವುದು ಬಹಳ ಕಷ್ಟ. ಅಂಥವರಲ್ಲಿ ಜಾಗೃತಿ ಮೂಡಿಸುವ ಕೆಲಸ ನಮ್ಮಿಂದಾಗಬೇಕು ಎಂದರು.
ಸುನೀಲ ನಾಯ್ಕ ಸಂಪಖಂಡ, ಚೈತನ್ಯ ವಿ. ಹೊಸೂರು, ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಯುವಕ ಹಾಗೂ ಕ್ರೀಡಾ, ಸಾಂಸ್ಕೃತಿಕ ಸಂಘದ ಪದಾಧಿಕಾರಿಗಳು ಇದ್ದರು. ಆರ್ಎಸ್ಎಸ್ ಸಂಚಾಲಕ ಸೋಮಶೇಖರ್ ಗೌಡರ್ ಸ್ವಾಗತಿಸಿದರು. ಶಿಕ್ಷಕ ಜಿ.ಟಿ. ಭಟ್ಟ ವಂದಿಸಿದರು, ಬಿ.ಕೆ. ದೇವಿಕಾ ನಿರ್ವಹಿಸಿದರು.