ಬೆಂಗಳೂರು: ರಾಜ್ಯ ರಾಜಧಾನಿ ನಿವಾಸಿಗಳೇ ಎಚ್ಚರ! ನಿಮ್ಮ ಮನೆಯಲ್ಲಿ ಯಾರಾದ್ರೂ ಮೃತಪಟ್ಟಾಗ ಬಿಬಿಎಂಪಿ ವ್ಯಾಪ್ತಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ‘ಲಾಸ್ಟ್ ಜರ್ನಿ’ ವೆಬ್ಸೈಟ್ನ ಮೊರೆ ಹೋಗುವ ಮುನ್ನ ಜಾಗ್ರತೆ. ಯಾಕಂದ್ರೆ ವಂಚಕರು ಬಿಬಿಎಂಪಿ ಚಿತಾಗಾರದ ಹೆಸರಿನಲ್ಲಿ ವೆಬ್ಸೈಟ್ ತೆರೆದು ಶವ ಸಂಸ್ಕಾರದ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ರಾಜರಾಜೇಶ್ವರಿನಗರ ವಲಯ ಎಇಇ ಗವಿಸಿದ್ದಯ್ಯ ಅವರು ದಕ್ಷಿಣ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪಾಲಿಕೆ ವ್ಯಾಪ್ತಿಯ ವಿದ್ಯುತ್ ಚಿತಾಗಾರಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಕೊಡಲಾಗಿದೆ. ಕೋವಿಡ್ ಸೋಂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳು ಬರುತ್ತಿದ್ದ ಕಾರಣ ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು ಮತ್ತು ಸಮಯ ಉಳಿತಾಯಕ್ಕಾಗಿ ಪಾಲಿಕೆಯಿಂದ ಆನ್ಲೈನ್ನಲ್ಲಿ ಉಚಿತವಾಗಿ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಶವ ದಹನ ಕ್ರಿಯೆಗೆ ಸ್ವಚ್ಛತೆ ಹಾಗೂ ಇನ್ನಿತರ ಸೇವೆಗೆಂದು ಪಾಲಿಕೆಯು 250 ರೂ. ಶುಲ್ಕ ಪಡೆದು ರಸೀದಿ ನೀಡುತ್ತದೆ. ಆದರೆ, ವಂಚಕರು ಅನಧಿಕೃತವಾಗಿ ‘ಲಾಸ್ಟ್ ಜರ್ನಿ’ ಎಂಬ ವೆಬ್ಸೈಟ್ ತೆರೆದು ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಬುಕ್ಕಿಂಗ್ ಮಾಡಿಕೊಡುವುದಾಗಿ ಹೇಳಿ 3,500 ರೂ. ವಸೂಲಿ ಮಾಡಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ.
ಸುಮ್ಮನಹಳ್ಳಿ, ಪೀಣ್ಯ, ಪ್ರಾಣಿಗಳ ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಬಂದವರು ಪಾಲಿಕೆ ಶುಲ್ಕ 250 ರೂ. ಕೊಡಲು ನಿರಾಕರಿಸುತ್ತಿದ್ದಾರೆ. ಪ್ರಶ್ನಿಸಿದರೆ, ಈ ಮೊದಲೇ 3,500 ರೂ. ಪಾವತಿ ಮಾಡಿದ್ದೇವೆ. ಬಿಬಿಎಂಪಿ ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ದೂರಿನಲ್ಲಿ ಪಾಲಿಕೆ ಅಧಿಕಾರಿ ಉಲ್ಲೇಖಿಸಿದ್ದಾರೆ. ಇದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕನ್ ಶವರ್ಮ ಸೇವಿಸಿದ್ದ ಓರ್ವ ವಿದ್ಯಾರ್ಥಿನಿ ಸಾವು, 14 ಮಂದಿ ಅಸ್ವಸ್ಥ
ರಾಮನಗರದಲ್ಲಿ ಪೊಲೀಸ್ ಮುಖ್ಯಪೇದೆ ಸಾವು: ಮದ್ವೆ ವಾರ್ಷಿಕೋತ್ಸವದ ಮುನ್ನಾದಿನವೇ ದುರಂತ