ರಾಯಚೂರು: ಗ್ರಾಹಕನೊಬ್ಬ ಹೊಟೇಲ್ ಮಾಲೀಕನ ಮೇಲೆ ಅಡುಗೆ ಎಣ್ಣೆ ಎರಚಿದ ಘಟನೆ ರಾಯಚೂರಿನ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ರಂಗಯ್ಯ ಶೆಟ್ಟಿ ಗಾಯಾಳು. ಈತ ಹೋಟೆಲ್ ಮಾಲೀಕನಾಗಿದ್ದಾನೆ. ಅದೇ ಗ್ರಾಮದ ಭೀಮಾ ನಾಯಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಗಾಯಗೊಂಡ ರಂಗಯ್ಯ ಅವರನ್ನು ಕುಡಲೇ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಚಿಕಿತ್ಸೆ ಮುಂದುವರಿದಿದೆ
ಇಂದು ಬೆಳ್ಳಂಬೆಳಗ್ಗೆ ಭೀಮಾ ನಾಯಕ್ ಹೋಟೆಲ್ಗೆ ಬಂದು ಇಡ್ಲಿ ಕೊಡಿ ಎಂದು ಕೇಳಿದ್ದಾನೆ. ಆಗ ಮಾಲೀಕ ರಂಗಯ್ಯ, ಇಡ್ಲಿ ಇಲ್ಲ ಎಂದು ಹೇಳಿ ವಾಪಸ್ ಕಳಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ವಾಪಸ್ ಹೋಟೆಲ್ಗೆ ಬಂದು ಒಗ್ಗರಣೆ ಮಿರ್ಚಿ ಕೊಡುವಂತೆ ಕೇಳಿದ್ದಾನೆ. ಆದರೆ ಇದು ತಂದುಕೊಡುವುದು ಸ್ವಲ್ಪ ತಡವಾಗಿದೆ.
ಸಿಟ್ಟಿಗೆದ್ದ ಭೀಮಾ ನಾಯಕ್, ಉಪ್ಪಿಟ್ಟು ಮಾಡಲು ಇಟ್ಟಿದ್ದ ಬಿಸಿ ಎಣ್ಣೆಯನ್ನು ರಂಗಯ್ಯ ಮುಖಕ್ಕೆ ಎರಚಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.