ಕಿಕ್ಕೇರಿ: ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅವಶ್ಯಕವಾಗಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ತಿಳಿಸಿದರು.
ಪಟ್ಟಣದ ಕೆಪಿಎಸ್ ಮೈದಾನದಲ್ಲಿ ಶನಿವಾರ ವಿನಯ್ ಎಚ್ಪಿಎಸ್ ಶಾಲೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ಇರಬೇಕು. ಮಕ್ಕಳಲ್ಲಿ ಇಂದು ದೇಸಿ ಕಲೆ ಮಾಯವಾಗುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಕ್ಕಳು ಜೋತು ಬೀಳುವಂತಾಗಿದೆ. ಮೊಬೈಲ್ ಗೀಳಿನಿಂದ ಪಾರಾಗಲು ಮಕ್ಕಳು ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗೆ ಪಾಲಕರು ಮನಸೋತರು. ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಚಿತ್ರನಟ ಮನು ಮಡೆನೂರು ಅವರ ಮಿಮಿಕ್ರಿ ನೆರೆದಿದ್ದವರ ರಂಜಿಸಿತು. ಸಿಆರ್ಸಿ ನಾಗರಾಜು, ಸಂಸ್ಥೆಯ ಸಂಸ್ಥಾಪಕ ಕೆ.ಎಸ್. ಶ್ರೀಕಾಂತ್, ಕಾರ್ಯದರ್ಶಿ ಕೆ.ಎಸ್.ವನಿತಾ, ಅಧ್ಯಕ್ಷೆ ಭಾಗ್ಯಮ್ಮ, ಡಾ. ಜಿ.ಪರಮೇಶ್ವರ್ ಯುವ ಬ್ರಿಗೇಡ್ ಅಧ್ಯಕ್ಷ ಅನಿಲ್ಕುಮಾರ್ ಇತರರು ಇದ್ದರು.