ಬೆಂಗಳೂರು: ಕಳೆದ ಒಂದು ವಾರದಲ್ಲಿ ನನ್ನ ಮನೆಯಲ್ಲಿ ಮೂವರು ಕರೊನಾಗೆ ಬಲಿಯಾಗಿದ್ದಾರೆ. ಮೊದಲು ನನ್ನ ಪತ್ನಿಯ ಅಜ್ಜಿ, ಆಮೇಲೆ ನನ್ನ ಪತ್ನಿಯ ತಾಯಿ, ಇವತ್ತು ನನ್ನ ಪತ್ನಿ. ನನಗೂ ಸೋಂಕಿನ ಲಕ್ಷಣಗಳಿವೆ. ನಾನು ಸತ್ತರೆ ನನ್ನ ಮಕ್ಕಳ ಗತಿ ಏನು? ಸಪ್ತಗಿರಿ ಆಸ್ಪತ್ರೆಗೆ ಹೋದ್ವಿ 5 ಲಕ್ಷ ರೂಪಾಯಿ ಕೇಳಿದ್ರು, ಎಲ್ಲಿಂದ ತರಬೇಕು ನಾವು? ಬೆಡ್ ಇದೆ ಇವತ್ತು ಮಧ್ಯಾಹ್ನ ಬನ್ನಿ ಅಂದ್ರು, ಲಕ್ಷ ಲಕ್ಷ ದುಡ್ಡು ಎಲ್ಲಿಂದ ತರಲಿ? ಯಡಿಯೂರಪ್ಪ ಗುಣಮುಖ ಆದ್ರು, ದೇವೇಗೌಡರೂ ಚೇತರಿಸಿಕೊಂಡರು. ಆದರೆ ಜನಸಾಮಾನ್ಯರೇಕೆ ಸಾಯ್ತಿದ್ದಾರೆ?… ಎಂದು ಆಕ್ರೋಶಗೊಂಡ ಶಿವಣ್ಣ ಎಂಬಾತ ಕರೊನಾ ಸೋಂಕಿನಿಂದ ಮೃತಪಟ್ಟ ಪತ್ನಿಯ ಶವವನ್ನ ಕೊಡುವುದಿಲ್ಲ ಎಂದು ಮನೆಯ ಗೇಟ್ಗೆ ಬೀಗ ಹಾಕಿ ಹಠ ಹಿಡಿದಿದ್ದ ಘಟನೆ ಬೆಂಗಳೂರಲ್ಲಿ ಸಂಭವಿಸಿದೆ.
ಮೃತಳ ಅಂತ್ಯಕ್ರಿಯೆ ನಡೆಸಲು ಶವ ಕೊಂಡೊಯ್ಯಲು ಮನೆ ಬಳಿ ಆಂಬುಲೆನ್ಸ್ ಬಂದರೂ ಶವ ನೀಡದೆ ಮೃತಳ ಗಂಡ, ಈಗ ಬಂದಿದ್ದೀರಾ? ನಾನು ಶವ ಕೊಡಲ್ಲ, ಕಾರ್ಪೋರೇಟರ್ ಬರಲಿ, ಮಿನಿಸ್ಟರ್ ಬರಲಿ. ನನಗೆ ಐಸಿಯು ಬೆಡ್ ಬೇಕು ಕೊಡಿಸ್ತೀರಾ? ಎಂದು ಕಿಡಿಕಾರಿದರು. ಇದನ್ನೂ ಓದಿರಿ ಕೋವಿಡ್19: ಅಂತಾರಾಷ್ಟ್ರೀಯ ಕ್ರೀಡಾಪಟು ದಯಾನಂದ ನಿಧನ
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸತತ ಐದು ತಾಸು ಮನವೊಲಿಸಿದರು. ನಿಮ್ಮನ್ನು ಕರೊನಾ ವಾರಿಯರ್ಸ್ ಅಂತಾರೆ. ಬೆಡ್ ಸಿಗದೆ ನಿಮ್ಮವರೇ ಎಷ್ಟೋ ಜನ ಸಾಯ್ತಿದ್ದಾರೆ. ಮೊದಲು ನಿಮಗೆ ಬೆಡ್ ಸಿಗುತ್ತಾ ಅಂತಾ ನೋಡಿಕೊಳ್ಳಿ. ಇವತ್ತು ನನ್ನ ಕುಟುಂಬಕ್ಕೆ ಆಗಿದೆ, ನಾಳೆ ನಿಮಗೂ ಆಗಬಾರದು. ಸರ್ಕಾರ ಏನು ಮಾಡ್ತಿದೆ? ಜನಸಾಮಾನ್ಯರ ಪ್ರಾಣಕ್ಕೆ ಬೆಲೆ ಇಲ್ಲವೇ? ಎಂದು ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ಬಂದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅನಿಲ್ ಕುಮಾರ್, 5 ಗಂಟೆಗಳ ಹೈಡ್ರಾಮಾಕ್ಕೆ ತೆರೆ ಎಳೆದರು. ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಅವರು ಶಿವಣ್ಣರ ಮನವೊಲಿಸಿ ಶವವನ್ನ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಮೃತಳ ಗಂಡನಿಗೆ ಎಂ.ಎಸ್.ಪಾಳ್ಯದ ಅವೇಕ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿರುವುದಾಗಿ ಸಿ.ಕೆ ಬಾಬಾ ಹೇಳಿದರು. ಕೋವಿಡ್ ಎರಡನೇ ಅಲೆ ಎಲ್ಲ ಕಡೆ ಶುರುವಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸಾವುಗಳು ಸಂಭವಿಸುತ್ತಿವೆ. ಇಲ್ಲಿ ಮೃತಳ ಗಂಡ ಎಮೋಷನಲ್ ಆಗಿದ್ದರಿಂದ ಮೃತದೇಹ ಕೊಡಲ್ಲ ಅಂತಾ ಹಠ ಮಾಡಿದ್ದರು. ಎಲ್ಲರೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಸಾವು ಆದಾಗ ಎಲ್ಲರಿಗೂ ನೋವು ಒಂದೇ ಎಂದರು.
ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ