ಕೋಲಾರ: ಕೇಂದ್ರ ಮಾಜಿ ಸಚಿವ, ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ನಿಧನರಾದ ಮೇಲೆ ಅವರು ಸ್ಥಾಪಿಸಿದ್ದ ಶ್ರೀ ದೇವರಾಜ ಅರಸು ಟ್ರಸ್ಟ್ನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಧಿಕಾರಕ್ಕಾಗಿ ಕಲಹ ಶುರುವಾಗಿದೆ.
ಜಾಲಪ್ಪ ಸ್ಥಾನಕ್ಕೆ ಹಿರಿಯ ಪುತ್ರ ನರಸಿಂಹಸ್ವಾಮಿ ಬದಲಿಗೆ ಕಾರ್ಯದರ್ಶಿ ಜಿ.ಎಚ್.ನಾಗರಾಜು ಆಯ್ಕೆ ವಿರೋಧಿಸಿ ಬಂಡಾಯದ ಕಹಳೆ ಮೊಳಗಿಸಿರುವ ಮಕ್ಕಳು ಮತ್ತು ಮೊಮ್ಮಕ್ಕಳು ಹಾಗೂ ಬೆಂಬಲಿಗರು ಸೋಮವಾರ ಬೃಹತ್ ಪ್ರತಿಭಟನೆ ಮೂಲಕ ಸೆಡ್ಡು ಹೊಡೆದಿದ್ದಾರೆ.
ಜಾಲಪ್ಪ ಅವರು ಅನಾರೋಗ್ಯದಿಂದಾಗಿ 5 ವರ್ಷಗಳಿಂದ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಆಗಿರಲಿಲ್ಲ. 2021ರ ಡಿ.17ರಂದು ಮೃತರಾದ ಮೇಲೆ ಕಾರ್ಯದರ್ಶಿ ನಾಗರಾಜ್ ಅವರನ್ನು ಒಂದು ಗುಂಪು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ತಮಗೆ ಸಿಕ್ಕ ಅಧಿಕಾರ ಬಳಸಿಕೊಂಡು ನಾಗರಾಜ್ ಅವರು ಟ್ರಸ್ಟ್ ಉಪಾಧ್ಯಕ್ಷರನ್ನಾಗಿ ಜಾಲಪ್ಪ ಅವರ ಕಿರಿಯ ಮಗ ರಾಜೇಂದ್ರ ಅವರನ್ನು ನೇಮಿಸಿಕೊಂಡು, ಈ ಹಿಂದೆ ಉಪಾಧ್ಯಕ್ಷರಾಗಿದ್ದ ರಾಜೇಶ್ ಎನ್.ಜಗದಾಳೆ ಹಾಗೂ ರಾಜೇಂದ್ರ ಅವರಿಗೆ ಮಾತ್ರ ಮತದಾನದ ಹಕ್ಕು ನೀಡಿ, ನರಸಿಂಹಸ್ವಾಮಿ ಅವರಿಗೆ ಯಾವುದೇ ಸ್ಥಾನ ನೀಡಿರಲಿಲ್ಲ. ಜತೆಗೆ ಮೊಮ್ಮಗ ಆನಂದ್ ಹಾಗೂ 4 ಹೆಣ್ಣು ಮಕ್ಕಳನ್ನು ಟ್ರಸ್ಟಿಗಳನ್ನಾಗಿ ನೇಮಿಸಿ ಮತದಾನದ ಹಕ್ಕು ನೀಡಿಲ್ಲ. ಇದರಿಂದ ಕುಪಿತರಾದ ಮಕ್ಕಳು, ಸಂಬಂಧಿಕರು, ಬೆಂಗಲಿಗರು ಪ್ರತಿಭಟನೆ ನಡೆಸಿದರು. ದೊಡ್ಡಬಳ್ಳಾಪುರ ಇನ್ನಿತರ ಕಡೆಯಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ಜಿ.ಎಚ್.ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ರಸ್ಟ್ನ ಅಧ್ಯಕ್ಷರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಪೊಲೀಸರು ಗುಂಪು ಚದುರಿಸಲು ಲಾಠಿ ಪ್ರಹಾರ ಮಾಡಿದರು.
ಪೊಲೀಸರ ವಿರುದ್ಧ ಕ್ರಮಕ್ಕೆ ಪಟ್ಟು: ಪ್ರತಿಭಟನಾಕಾರರು ಸ್ಥಳಕ್ಕೆ ಗೃಹಸಚಿವರು ಬಂದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದು ಧರಣಿ ಕುಳಿತಿದ್ದರಿಂದ ಜನರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಮಧ್ಯೆ ಜಾಲಪ್ಪ ಅವರ ಹಿರಿಯ ಮಗ ನರಸಿಂಹಸ್ವಾಮಿ ಅವರನ್ನು ಕೆಲವರು ಅಧ್ಯಕ್ಷರ ಕುರ್ಚಿಯಲ್ಲಿ ಕೂರಿಸಿ ಅಭಿನಂದನೆ ಸಲ್ಲಿಸಿದರಲ್ಲದೆ, ನಾಗರಾಜು ಮತ್ತವರ ತಂಡಕ್ಕೆ ಪ್ರವೇಶವಿಲ್ಲವೆಂದು ಘೋಷಣೆ ಮಾಡಿದರು.
ಅಪ್ಪನ ನಂತರ ನಾನೇ ಅಧಿಪತಿ: ಅಧ್ಯಕ್ಷರ ಕೋಣೆಯಲ್ಲಿ ಕುರ್ಚಿ ಅಲಂಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನರಸಿಂಹಸ್ವಾಮಿ, ನಮ್ಮ ತಂದೆ ಬಡವರ ಸಲುವಾಗಿ ದೇವರಾಜ ಅರಸು ಟ್ರಸ್ಟ್ ಸ್ಥಾಪಿಸಿದರು. ಟ್ರಸ್ಟ್ನಲ್ಲಿ ಕೇವಲ ಜಾಲಪ್ಪನವರ ಕುಟುಂಬಸ್ಥರಿಗೆ ಮಾತ್ರವಲ್ಲದೆ ಹಿಂದುಳಿದ ವರ್ಗಕ್ಕೆ ಸೇರಿದ ಅನೇಕರಿಗೆ ಸ್ಥಾನ ಕಲ್ಪಿಸಿದ್ದರು. ಜಾಲಪ್ಪ ಬರೆದಿರುವ ವಿಲ್ನಲ್ಲಿ ನನ್ನ ನಂತರ ಹಿರಿಯ ಮಗ ಟ್ರಸ್ಟ್ ಅಧಿಪತಿಯಾಗಬೇಕೆಂದು ತಿಳಿಸಿದ್ದಾರೆ. ಆದರೆ ಸಂಬಂಧಿ ಎಂದು ಹೇಳಿಕೊಂಡು ಟ್ರಸ್ಟ್ ಕಾರ್ಯದರ್ಶಿಯಾದ ಜೆ.ಎಚ್.ನಾಗರಾಜು, ನಮ್ಮ ತಂದೆಯವರು ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಳಿಕ ಸಂಪೂರ್ಣ ಆಡಳಿತವನ್ನು ಹಿಡಿತಕ್ಕೆ ಪಡೆದು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಗಳ ಸುರಿಮಳೆಗೈದರು.
ನಾಗರಾಜ್ ಅಧ್ಯಕ್ಷರಾಗುವುದಕ್ಕೆ ಅರ್ಹರಲ್ಲ, ಬೇಕಿದ್ದರೆ ಕಾರ್ಯದರ್ಶಿಯಾಗಿ ಮುಂದುವರಿಯಲಿ. ಟ್ರಸ್ಟ್ನಲ್ಲಿ ನಮ್ಮ ಕುಟುಂಬದ ಸದಸ್ಯರಿಗೆ ಸೂಕ್ತ ಸ್ಥಾನಮಾನದ ಜತೆಗೆ ಮತದಾನದ ಹಕ್ಕು ನೀಡಬೇಕೆಂದು ಒತ್ತಾಯಿಸಿದರು.
ಅಕ್ರಮ ತನಿಖೆಗೆ ಒತ್ತಾಯ: ಜೆ.ಎಚ್.ನಾಗರಾಜು ನಮ್ಮ ತಾತನವರ ನೆಂಟರೂ ಅಲ್ಲ, ಕುಟುಂಬದ ಸದಸ್ಯರೂ ಅಲ್ಲ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪನೆ ವೇಳೆ ಸಹಕರಿಸಿದ್ದಾರೆಂಬ ಕಾರಣಕ್ಕೆ ಟ್ರಸ್ಟ್ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಜಾಲಪ್ಪ ಅವರು ಟ್ರಸ್ಟ್ ಕೆಲಸ ನಿರ್ವಹಿಸಲು ಸಾಧ್ಯವಾಗದಿದ್ದಾಗ ನಾಗರಾಜು ಅವರು ಅವಕಾಶ ದುರುಪಯೋಗ ಪಡಿಸಿಕೊಂಡು ಅನೇಕ ಅಕ್ರಮ ನಡೆಸಿದ್ದು, ಸರ್ಕಾರ ಸಮಗ್ರ ತನಿಖೆ ನಡೆಸಬೇಕೆಂದು ಜಾಲಪ್ಪ ಮೊಮ್ಮಗ ಎನ್.ಅರವಿಂದ್ ಆಗ್ರಹಿಸಿದರು.
ನಾಗರಾಜು ಅವರಿಗೆ ಟ್ರಸ್ಟ್ ಬಗ್ಗೆ ಮತ್ತು ಜಾಲಪ್ಪನವರ ಬಗ್ಗೆ ಕಿಂಚಿತ್ತಾದರೂ ಅಭಿಮಾನ, ಕೃತಜ್ಞತೆ ಇದ್ದಿದ್ದರೆ ಕೆಲ ವರ್ಷಗಳ ಹಿಂದೆ ಟ್ರಸ್ಟ್ ಮೇಲೆ ಐಟಿ ದಾಳಿ ನಡೆಸಿದಾಗ ಏಕೆ ದನಿ ಎತ್ತಲಿಲ್ಲ? ರಶೀದ್ ಕೊಲೆ ಪ್ರಕರಣದಲ್ಲಿ ಜಾಲಪ್ಪ ಅವರ ಮೇಲೆ ಆರೋಪ ಕೇಳಿ ಬಂದಾಗ ಸಹಾಯಕ್ಕೆ ಏಕೆ ನಿಲ್ಲಲಿಲ್ಲ? ಜಾಲಪ್ಪ ನಿಧನರಾಗುವವರೆಗೆ ಸುಮ್ಮನಿದ್ದು, ಈಗ ಅಧ್ಯಕ್ಷರಾಗಿರುವುದಾಗಿ ಘೋಷಣೆ ಮಾಡಿಕೊಂಡಿರುವ ಹಿಂದಿನ ಗುಟ್ಟೇನು? ಎಂದು ಪ್ರಶ್ನಿಸಿದರು.
ಸೇತುವೆ ಮೇಲಿಂದ ಪ್ರಪಾತಕ್ಕೆ ಕಾರು ಪಲ್ಟಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ದಾರುಣ ಸಾವು
ಗ್ರಾಪಂ ಕಚೇರಿಯಲ್ಲೇ ಪ್ರೇಮಿಗಳ ಮದುವೆ, ಪೌರೋಹಿತ್ಯ ವಹಿಸಿದ ಪಿಡಿಒ! ನಂಜನಗೂಡಲ್ಲಿ ನವಜೋಡಿ ಪ್ರಕರಣ ಸುಖಾಂತ್ಯ