ಬೆಂಗಳೂರು: ಸ್ಟೀಲ್ ಮಾರಾಟ ವಿತರಕ ಅನುಮತಿ ಪಡೆಯಲು ಕಂಪನಿಯ ಸಂಪರ್ಕ ಸಂಖ್ಯೆಯನ್ನು ಗೂಗಲ್ನಲ್ಲಿ ಸರ್ಚ್ ಮಾಡಿ ಕರೆ ಮಾಡಿದ ಗುತ್ತಿಗೆದಾರನಿಗೆ ಸೈಬರ್ ಕಳ್ಳರು 33.22 ಲಕ್ಷ ರೂ. ವಂಚಿಸಿದ್ದಾರೆ.
ಇಂದಿರಾನಗರದ ಎಸ್. ಶ್ರೀನಿವಾಸ್ ರೆಡ್ಡಿ ವಂಚನೆಗೆ ಒಳಗಾದವರು. ಇವರ ಪುತ್ರ ಕೊಟ್ಟ ದೂರಿನ ಮೇರೆಗೆ ಪೂರ್ವ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಟಾ ಸ್ಟೀಲ್ ಮಾರಾಟದ ಗುತ್ತಿಗೆ ಪಡೆಯಲು ಬಯಸಿದ್ದ ಶ್ರೀನಿವಾಸ್, ಕಂಪನಿ ಅಧಿಕಾರಿಗಳನ್ನು ಸಂಪರ್ಕ ಮಾಡಲು ದೂರವಾಣಿ ಸಂಖ್ಯೆ ಹುಡುಕುತ್ತಿದ್ದರು. ಇದರ ನಡುವೆ ಗೂಗಲ್ನಲ್ಲಿ ಟಾಟಾ ಸ್ಟೀಲ್ ಕಂಪನಿ ನಂಬರ್ ಸರ್ಚ್ ಮಾಡಿದಾಗ ಹೆಲ್ಪ್ಲೈನ್ ಲಭ್ಯವಾಗಿತ್ತು. ಅದಕ್ಕೆ ಕರೆ ಮಾಡಿದಾಗ ಆತ ಮತ್ತೊಂದು ಮೊಬೈಲ್ ನಂಬರ್ ಕೊಟ್ಟಿದ್ದ. ಅದಕ್ಕೆ ಕರೆ ಮಾಡಿದಾಗ ನಕಲಿ ದಾಖಲೆ ಪತ್ರಗಳನ್ನು ವಾಟ್ಸ್ಆ್ಯಪ್ನಲ್ಲಿ ಕಳುಹಿಸಲು ಸೂಚಿಸಿದ್ದರು.
ಆನ್ಲೈನ್ನಲ್ಲಿಯೇ ಕರಾರು ಒಪ್ಪಂದ ಮಾಡಿಕೊಳ್ಳುವುದಾಗಿ ಸೈಬರ್ ವಂಚಕರು, ಗುತ್ತಿಗೆದಾರನಿಗೆ ನಂಬಿಸಿ ತಮ್ಮ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ಹಂತ ಹಂತವಾಗಿ 33.22 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು. ಆದರೆ, ಯಾವುದೇ ಸರಕನ್ನು ಗುತ್ತಿಗೆದಾರನಿಗೆ ಕಳುಹಿಸಿರಲಿಲ್ಲ. ಆದರೂ ಮತ್ತಷ್ಟು ಹಣ ಕಳುಹಿಸುವಂತೆ ಪದೇ ಪದೆ ಒತ್ತಾಯ ಮಾಡುತ್ತಿದ್ದಾಗ ಅನುಮಾನ ಬಂದು ಸಂಬಂಧಪಟ್ಟವನ್ನು ವಿಚಾರಿಸಿದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.