More

    ಮಗು ಅಪಹರಣ ಕೇಸ್​: ತನಿಖೆಗೆ ಹೆದರಿ ವಿಷ ಕುಡಿದ ಒಂದೇ ಕುಟುಂಬದ ಐವರಲ್ಲಿ ಒಬ್ಬರೂ ಬದುಕಲಿಲ್ಲ…

    ಕೋಲಾರ: ಹೆಣ್ಣು ಮಗುವಿನ ಅಪಹರಣ ಹಾಗೂ ಮಾರಾಟ ಆರೋಪದಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಂದೇ ಕುಟುಂಬದ ಐವರೂ ದುರಂತ ಅಂತ್ಯ ಕಂಡಿದ್ದಾರೆ.

    ನಗರದ ಕಾರಂಜಿಕಟ್ಟೆಯ 4ನೇ ಕ್ರಾಸ್ ನಿವಾಸಿಗಳಾದ ಮುನಿಯಪ್ಪ (70), ನಾರಾಯಣಮ್ಮ (65), ಬಾಬು (45), ಗಂಗೋತ್ರಿ (17) ಹಾಗೂ ಪುಷ್ಪಾ (35) ಮೃತರು. ಅ.18ರಂದು ಕೋಲಾರ ತಾಲೂಕಿನ ಹೊನ್ನೇನಹಳ್ಳಿಯ ಸತ್ಯ ಮತ್ತು ಸುಮಿತ್ರಾ ದಂಪತಿಯ ಹೆಣ್ಣು ಮಗುವನ್ನು ಪರಿಚಯಸ್ಥ ಮಹಿಳೆಯೊಬ್ಬರು ಗೀತಾ ಎಂಬಾಕೆಗೆ ನೀಡಿದ್ದರು. 9 ದಿನಗಳ ನಂತರ ಸದರಿ ಮಗುವನ್ನು ಗೀತಾ, ಪುಷ್ಪಾಗೆ ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ಮಗು ಕಳೆದುಕೊಂಡಿದ್ದ ದಂಪತಿ ಕೋಲಾರ ಮಹಿಳಾ ಠಾಣೆಗೆ ದೂರು ನೀಡಿದ್ದರು.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪುಷ್ಪಾ ಹಾಗೂ ಗೀತಾ ಅವರನ್ನು ವಿಚಾರಣೆ ನಡೆಸಿದಾಗ ಪುಷ್ಪಾ ಮಗುವಿನ ಅಪಹರಣ ಮತ್ತು ಮಾರಾಟಕ್ಕೂ ನನಗೂ ಸಂಬಂಧವಿಲ್ಲವೆಂದು ಹೇಳಿಕೆ ನೀಡಿದ್ದರಾದರೂ, ಪೊಲೀಸರು ತಪ್ಪು ಒಪ್ಪಿಕೊಳ್ಳದಿದ್ದರೆ ಎಫ್​ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

    ಇದರಿಂದ ಭಯಗೊಂಡ ಪುಷ್ಪಾ ಮನೆಯಲ್ಲಿ ಗಂಡ ಮತ್ತು ತಂದೆ-ತಾಯಿಗೆ ವಿಷಯ ಮುಟ್ಟಿಸಿದಾಗ, ಬೇಸತ್ತ ಮನೆಯ ಐದೂ ಮಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಲ್​ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

    ಘಟನೆಯ ಹಿನ್ನೆಲೆ: ಕೋಲಾರ ತಾಲೂಕಿನ ಹೊನ್ನೇನಹಳ್ಳಿಯ ಸತ್ಯ ಹಾಗೂ ಸುಮಿತ್ರ ಎಂಬುವರು ಪ್ರೀತಿಸಿ ಮನೆಯವರಿಗೆ ತಿಳಿಯದೆ ಮದುವೆಯಾಗಿದ್ದರು ಈನಡುವೆ ಅವರಿಗೆ ಒಂದು ಹೆಣ್ಣು ಮಗುವಾಗಿತ್ತು. ಆಗ, ಮನೆಯವರಿಗೆ ವಿಷಯ ತಿಳಿದರೆ ಅನ್ನೋ ಭಯದಲ್ಲಿ ಮಗುವನ್ನು ತಮ್ಮ ಪರಿಚಯಸ್ಥರಾದ ಕಾರಂಜಿಕಟ್ಟೆ ನಿವಾಸಿ ಗೀತಾ ಅನ್ನೋರಿಗೆ ಸತ್ಯ ಹಾಗೂ ಸುಮಿತ್ರ ಅ.18ರಂದು ಕೊಟ್ಟಿದ್ದರು. ಈ ವೇಳೆ ಪುಷ್ಪಾ ಎಂಬಾಕೆ ಹೋಗಿದ್ದರು ಅನ್ನೋ ಕಾರಣಕ್ಕೆ ಮಗು ಅಪಹರಣ ಪ್ರಕರಣದಲ್ಲಿ ಪುಷ್ಪಾರ ಹೆಸರಿದೆ. ಅಲ್ಲದೆ ಅವರೆಲ್ಲರೂ ಕೋಲಾರಮ್ಮ ದೇವಾಲಯದ ಬಳಿ ಕುಳಿತು ಮಾತನಾಡಿ ಮಗು ತೆಗೆದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿದ್ದು, ಈ ದೃಶ್ಯ ಪೊಲೀಸರಿಗೆ ಸಿಕ್ಕಿದೆ. ಹಾಗಾಗಿ ಪೊಲೀಸರು ಪುಷ್ಪಾರನ್ನು ಕೋಲಾರದ ಮಹಿಳಾ ಪೊಲೀಸ್​ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದರು. ಅಲ್ಲದೆ ಮಗುವನ್ನು ತಂದು ಕೊಡುವಂತೆ ಸಮಯ ಕೊಟ್ಟು ಕಳಿಸಿದ್ದರು. ಆದರೆ ಗೀತಾ ತಲೆ ಮರೆಸಿಕೊಂಡು ಮಗುವನ್ನು ಪುಷ್ಪಾಳಿಗೆ ಕೊಟ್ಟಿದ್ದೆ. ನನಗೇನು ಗೊತ್ತಿಲ್ಲ ಎಂದು ಹೇಳಿ ನಾಪತ್ತೆಯಾಗಿದ್ದಳು. ಪ್ರಕರಣ ನೇರ ಪುಷ್ಪಾಳ ಮೇಳೆ ತಿರುಗುತ್ತದೆ ಎಂದು ಹೆದರಿಕೊಂಡು ಇಡೀ ಕುಟುಂಬಸ್ಥರು ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಪ್ರಕರಣದ ತನಿಖೆ ವೇಳೆ ಕೇವಲ 9 ದಿನಗಳ ಮಗುವನ್ನು ಈ ದಂಪತಿ ಹೇಗೆ ಕೊಡಲು ಸಾಧ್ಯ? ಕೊಟ್ಟ ನಂತರ ಒಂದೇ ಒಂದು ದಿನವೂ ಮಗುವಿನ ಯೋಗಕ್ಷೇಮ ವಿಚಾರಿಸಲು ಬಂದಿಲ್ಲ, ಹಾಗೊಂದು ವೇಳೆ ಮಗುವನ್ನು ನೋಡಲು ಬಂದಿದ್ದರೆ ಮಗುವಿನ ಎಲ್ಲ ವಿಚಾರ ತಿಳಿಯುತ್ತಿತ್ತು. ಆದರೆ ಮಗುವನ್ನು ಈ ದಂಪತಿಗಳೇ ಮಾರಾಟ ಮಾಡಿದ್ದಾರಾ? ಅನ್ನೋ ಅನುಮಾನ ಮೂಡಿದೆ.

    ಇನ್ನು ಎಲ್ಲರೂ ವಿಷ ಸೇವಿಸುವ ಮುನ್ನ ಡೆತ್ ನೋಟ್​ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಡೆತ್​ನೋಟ್​ ನಲ್ಲಿ ತಮ್ಮದಲ್ಲದ ತಪ್ಪಿಗೆ ನಮ್ಮನ್ನು ಪೊಲೀಸ್ ಠಾಣೆಗೆ ಕರೆಸಿ ಅವಮಾನ ಮಾಡಿದ್ದರಿಂದ ಮನನೊಂದು ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ ಎನ್ನಲಾಗಿದೆ.

    ಒಂದೇ ಗ್ರಾಮದ ಇಬ್ಬರ ಜತೆ ಯುವಕನ ಲವ್ವಿಡವ್ವಿ… ಪ್ರಿಯಕರನ ಓಲೈಕೆಗಾಗಿ ನಡೆದೇ ಹೋಯ್ತು ಘೋರ ಕೃತ್ಯ

    ನನ್ನ ಗಂಡ ನಿತ್ಯ ಅಶ್ಲೀಲ ವಿಡಿಯೋ ನೋಡ್ತಾನೆ, ವೇಶ್ಯೆಯರ ಜತೆ ಚಾಟಿಂಗ್​ ಮಾಡ್ತಾನೆ… ಪ್ರಶ್ನಿಸಿದ್ರೆ ಹಿಂಸಿಸ್ತಾನೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts