ಸೂಲಿಬೆಲೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೂಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಭೈರೇಗೌಡ ನಗರದ ಬ್ರಾಹ್ಮಣರ ಸ್ಮಶಾಸನದಲ್ಲಿ ಕಾಮಗಾರಿ ಕೈಗೊಂಡಿದ್ದರೂ ಶವ ಸಂಸ್ಕಾರಕ್ಕೆ ಅಡ್ಡಿಯಾಗುತ್ತಿದೆ.
ಸ್ಮಶಾನವನ್ನು 2017-18ರ ಅವಧಿಯಲ್ಲಿ 9.70 ಲಕ್ಷ ರೂಪಾಯಿ ವೆಚ್ಚ ಮಾಡಿ ಕಾಮಗಾರಿ ನಡೆಸಲಾಗಿತ್ತು. ಹೀಗಿದ್ದರೂ ಸ್ಮಶಾನದಲ್ಲಿ ಗಿಡ-ಗಂಟಿ ಹಾಗೂ ಪೊದೆ ಬೆಳೆದು ಶವಗಳ ಸಂಸ್ಕಾರಕ್ಕೆ ತೊಂದರೆಯಾಗಿದೆ.
ಬೆಳೆದಿರುವ ಗಿಡಗಳನ್ನು ತೆರವುಗೊಳಿಸಿ ಸಂಸ್ಕಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಸ್ಮಶಾನವನ್ನು ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಲ್ಲಿ ಮನವಿ ಮಾಡಿದರೆ ಯಾವುದೇ ಪ್ರಯೋಜನವಾಗಿಲ್ಲ. ಸ್ಮಶಾನದಲ್ಲಿ ಗಿಡಗಳು ಬೆಳೆದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ಕೈಚೆಲ್ಲುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳು ಕಚೇರಿಯಲ್ಲಿ ಕುಳಿತರೇ ಸಮಸ್ಯೆಗಳು ಗೋಚರಿಸುವುದಿಲ್ಲ. ಹಳ್ಳಿಗಳಲ್ಲಿ ಸುತ್ತಾಡಿದರೆ ಗಮನಕ್ಕೆ ಬರುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಸ್ಮಶಾನವನ್ನು 2 ವರ್ಷಗಳ ಹಿಂದೆ ಕಾಮಗಾರಿ ನಡೆಸಿ ಅಭಿವೃದ್ಧಿಪಡಿಸಲಾಗಿತ್ತು. ಈಗ ಗಿಡಗಳು ಬೆಳೆದಿವೆ. ನರೇಗಾ ಇಂಜಿನಿಯರ್ಗಳು ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ಮಾಡಬೇಕು.
ಎಂ.ಆರ್.ಉಮೇಶ್, ಸೂಲಿಬೆಲೆಕಾಮಗಾರಿಗಳಿಗೆ ಸರ್ಕಾರ ಕೋಟಿಗಟ್ಟಲೇ ಹಣ ವ್ಯಯಿಸುತ್ತದೆ. ಕಾಮಗಾರಿ ಅಂತ್ಯಗೊಂಡ ನಂತರ ಆಗಾಗ ಅಧಿಕಾರಿಗಳು ಭೇಟಿ ನೀಡಿ ನಿರ್ವಹಣೆ ಕೈಗೊಂಡರೆ ಸರ್ಕಾರದ ಹಣ ವ್ಯರ್ಥವಾಗುವುದಿಲ್ಲ.
ಗುರುರಾಜ್, ಸೂಲಿಬೆಲೆ