ಹಾಸನ: ಸಕಲೇಶಪುರ ತಾಲೂಕಿನ ಬಿಸ್ಲೆ ಘಾಟ್ ಸಮೀಪ ಕಾರನ್ನು ಓವರ್ಟೇಕ್ ಮಾಡಿದ್ದಕ್ಕೆ ಪಾನಮತ್ತ ಮೂವರು ಅಪರಿಚಿತರು ಕುಟುಂಬಸ್ಥರ ಹಲ್ಲೆ ನಡೆಸಿದ್ದು, ಸಹಾಯವಾಣಿಗೆ ಮಹಿಳೆ ಕರೆ ಮಾಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ತುರ್ತು ಸಮಯದಲ್ಲಿ ಸ್ಪಂದಿಸದ 100, 112 ಸಹಾಯವಾಣಿ ಯಾಕೆ ಬೇಕು? ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮೂಲದ ಸ್ಕಂದನ್ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆದಿದ್ದು ಈ ಸಂಬಂಧ ಸ್ಕಂದನ್ ಪತ್ನಿ ವಿಡಿಯೋ ಮೂಲಕ ಸಮಸ್ಯೆ ಹೇಳಿಕೊಂಡಿದ್ದಾರೆ. ಮಾ. 27ರಂದು ಬೆಂಗಳೂರಿನಿಂದ ಕುಟುಂಬಸ್ಥರು ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದು ವಾಪಸಾಗುತ್ತಿದ್ದಾಗ ಬಿಸ್ಲೆ ಘಾಟ್ ಸಮೀಪ ಮುಂದಿದ್ದ ಕಾರನ್ನು ಓವರ್ಟೇಕ್ ಮಾಡಿದೆವು. ಆಗ ಹಿಂಬಾಲಿಸಿಕೊಂಡು ಬಂದ ಮೂವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರು. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲು 112 ಸಹಾಯವಾಣಿಗೆ ಕರೆ ಮಾಡಿದರೂ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಮೊದಲು 100ಗೆ ಕರೆ ಮಾಡಿದ್ದೆ. ಅವರು 112ಗೆ ಕರೆ ಮಾಡಲು ತಿಳಿಸಿದರು. ಆದರೆ, ಆ ನಂಬರ್ ಅನ್ನು ಯಾರೂ ಸ್ವೀಕರಿಸಲಿಲ್ಲ. ನಾವೇ ಕಷ್ಟಪಟ್ಟು ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದೆವು. ಘಟನೆ ನಡೆದು ಎರಡು ಗಂಟೆಯಾದರೂ ಯಾವ ಪೊಲೀಸರು ನಮ್ಮ ನೆರವಿಗೆ ಬರಲಿಲ್ಲ. ಆ ವೇಳೆ ಯಾರಾದರೂ ನಮ್ಮನ್ನು ಕೊಲೆ ಮಾಡಿದ್ದರೆ ಏನು ಗತಿ? ಎಂದು ವಿಡಿಯೋ ಮೂಲಕ ಮಹಿಳೆ ಆತಂಕ ವ್ಯಕ್ತಪಡಿಸಿದ್ದಾರೆ.
ಬಹಳ ಸಮಯದ ಬಳಿಕ ಯಸಳೂರು ಪೊಲೀಸರು ಸಮಸ್ಯೆಗೆ ಸ್ಪಂದಿಸಿದರು. ನಮಗೆ ಊಟ ಕೊಡಿಸಿ ದೂರು ಸ್ವೀಕರಿಸಿದರು. ಮಾನವೀಯತೆಯಿಂದ ಠಾಣೆಯ ಸಿಬ್ಬಂದಿ ನೆರವಾದರು. ಆದರೆ, ತುರ್ತು ಸಮಯದಲ್ಲಿ ಸ್ಪಂದಿಸದ 100, 112 ಸಹಾಯವಾಣಿ ಯಾಕೆ ಬೇಕು? ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಯಸಳೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
‘ನಡೆದಾಡೋ ದೇವರ ಬಸವ ಭಾರತ’ ಕಿರುಚಿತ್ರ ಏ.1ಕ್ಕೆ ಉದ್ಘಾಟನೆ: ಸಿದ್ಧಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್?
ನಿನ್ನ ಹೆಂಡ್ತಿಯನ್ನ ನನ್ನ ಜತೆ ಕಳಿಸು… ಗಂಡನ ಎದುರಲ್ಲೇ ಪರಪುರುಷನ ರಂಪಾಟ! ದುಡುಕಿದ ಪತ್ನಿ, ನಡೆದೇ ಹೋಯ್ತು ದುರಂತ