ಮಂಗಳೂರು: ಬೆಂಗಳೂರಿನ ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್ ಅಪಾರ್ಟ್ಮೆಂಟ್ನಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಆಟೋ ಚಾಲಕರಿಬ್ಬರ ಸಮಯ ಪ್ರಜ್ಞೆಯಿಂದ ಪತ್ತೆಯಾಗಿದ್ದು, ಪೊಲೀಸರ ಬಳಿ ಮನದ ನೋವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಅಮೃತವರ್ಷಿಣಿ, ಭೂಮಿ, ಚೇತನ್, ರಾಯನ್ ಎಂಬ ಮಕ್ಕಳು 2 ದಿನದ ಹಿಂದೆ ನಾಪತ್ತೆಯಾಗಿದ್ದರು. ಮೊದಲು ಬೆಂಗಳೂರಿಂದ ರೈಲು ಮೂಲಕ ಬೆಳಗಾವಿಗೆ ಹೋಗಿದ್ದ ಈ ಮಕ್ಕಳು, ಅಲ್ಲಿಂದ ಮೈಸೂರಿಗೆ ಬಂದು ಮತ್ತೆ ಬೆಂಗಳೂರಿಗೆ ಹೋಗಿ ಸೋಮವಾರ ಸಂಜೆ ಸಂಜೆ ಮೆಜೆಸ್ಟಿಕ್ನಿಂದ ಸ್ಲೀಪರ್ ಬಸ್ನಲ್ಲಿ ಹೊರಟು ಮಂಗಳವಾರ ಬೆಳಗ್ಗೆ ಮಂಗಳೂರಿಗೆ ಬಂದಿಳಿದಿದ್ದರು. ಈ ವೇಳೆ ಆಟೋ ಚಾಲಕರಾದ ರಮೇಶ್ ಮತ್ತು ಪ್ರಶಾಂತ್ ಇಬ್ಬರೂ ಅನುಮಾನಗೊಂಡು ಈ ನಾಲ್ವರು ಮಕ್ಕಳನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಮಕ್ಕಳನ್ನು ಕರೆತಂದು ಬಿಟ್ಟಾಗ ಬೆಂಗಳೂರಲ್ಲಿ ನಾಪತ್ತೆಯಾಗಿದ್ದ ಮಕ್ಕಳೇ ಇವರು ಎಂದು ಗೊತ್ತಾಗಿದೆ. ಡಿಸಿಪಿ ಹರಿರಾಂ ಶಂಕರ್ ಅವರು ವಿಚಾರಣೆ ನಡೆಸಿದ್ದು, ಅವರ ಬಳಿ ಮಕ್ಕಳು ಮನದ ನೋವನ್ನ ಬಿಚ್ಚಿಟ್ಟಿದ್ದಾರೆ.
‘ನಾವು 4 ಜನ ತುಂಬಾ ಕ್ಲೋಸ್ ಫ್ರೆಂಡ್ಸ್. ಮನೆಯವರು ನಮ್ಮನ್ನು ಬೇರೆ ಮಾಡೋಕೆ ನೋಡಿದ್ರು. ನಮ್ಮನೇಲಿ ಹಾಗೂ ಪರಿಸರದಲ್ಲಿ ನಮ್ಮನ್ನ ನೋಡಿದ್ರೆ ಬೈತಿದ್ರು. ನಮಗಿಂತ ಚಿಕ್ಕವರ ಮುಂದೆಯೂ ನಮಗೆ ಬೈತಿದ್ರು. ನಮ್ಮನ್ನ ಬೇರೆಬೇರೆ ಮಾಡಲು ನೋಡ್ತಿದ್ದರು. ನಮ್ಮನ್ನ ದೂರ ಮಾಡ್ಬಿಡ್ತಾರೆ ಅಂತ ನಾವು ಮನೆ ಬಿಟ್ಟು ಹೋಗಕ್ಕೆ ಪ್ಲಾನ್ ಮಾಡಿದ್ವಿ. ನಾಲ್ಕೂ ಜನ ಒಟ್ಟಾಗಿ ಕ್ರಿಕೆಟ್ ಆಟವಾಡ್ತೀವಿ ಎಂತ ಹೇಳಿ ಮನೆಯಿಂದ ಲಗೇಜ್ ಸಮೇತ ಹೊರ ಬಂದ್ವಿ. ಆಮೇಲೆ ಬೆಳಗಾವಿಗೆ ರೈಲ್ ಹತ್ತಿದ್ವಿ…’ ಎಂದು ಮಕ್ಕಳು ಬಾಯ್ಬಿಟ್ಟಿದ್ದಾರೆ. ಮಕ್ಕಳು ಸಿಕ್ಕ ಸುದ್ದಿ ಕೇಳಿ ಪಾಲಕರು ನಿಟ್ಟುಸಿರು ಬಿಟ್ಟಿದ್ದು, ಇನ್ಮುಂದೆ ಮಕ್ಕಳನ್ನ ಬೈಯಲ್ಲ, ಅವರು ಮನೆಗೆ ಸೇಫಾಗಿ ಬಂದ್ರೆ ಸಾಕು ಎನ್ನುತ್ತಿದ್ದಾರೆ.
ಚಿಂದಿ ಆಯುವವನಿಂದಾಗಿ ಮರುಜನ್ಮ ಪಡೆದ ಬೆಂಗಳೂರು ಮಕ್ಕಳು! ಸಾಧನೆ ಮಾಡಲು ಮನೆಬಿಟ್ಟವರು ಸಿಕ್ಕಿದ್ದೇ ರೋಚಕ