ತುಮಕೂರು: ಕಾವಲುಗಾರನನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು ನಾಗವಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಬಾಗಿಲು ಮುರಿದು ಭಾನುವಾರ ಮಧ್ಯರಾತ್ರಿ ಹಣ ದೋಚಿದ್ದಾರೆ.
ಕಾವಲುಗಾರ ಹೆಬ್ಬೂರಿನ ಸಿದ್ದಪ್ಪ (55) ಮೃತ. ಎರಡು ದಿನದಿಂದ ಸೊಸೈಟಿಗೆ ರಜೆ ಇರುವುದನ್ನು ಗಮನಿಸಿದ್ದ ಕಳ್ಳರು ಭಾನುವಾರ ರಾತ್ರಿ 12ರ ಸಮಯದಲ್ಲಿ ದಾಳಿ ನಡೆಸಿದ್ದು, ಕಾವಲುಗಾರ ಸಿದ್ದಪ್ಪನನ್ನು ಆತನ ಬಟ್ಟೆಯಿಂದಲೇ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸೊಸೈಟಿಯಲ್ಲಿರುವ ಸಿಸಿ ಕ್ಯಾಮರಾಗಳನ್ನು ಒಡೆದುಹಾಕಿ ಒಳನುಗ್ಗಿ ಎರಡು ಕಬ್ಬಿಣದ ಬೀರುವಿನಲ್ಲಿದ್ದ 2.60ಲಕ್ಷ ರೂ. ನಗದು ದೋಚಿದ್ದಾರೆ.
ಸೋಮವಾರ ಬೆಳಗ್ಗೆ 9ಕ್ಕೆ ಸೊಸೈಟಿಗೆ ಕರ್ತವ್ಯಕ್ಕೆ ಬಂದ ಸಿಬ್ಬಂದಿಗೆ ಸಿದ್ದಪ್ಪ ಕೊಲೆಯಾಗಿರುವುದು ತಿಳಿದುಬಂದಿದೆ, ಸೊಸೈಟಿ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟರ್ ಬಳಸಿ ಮುರಿದುಹಾಕಲಾಗಿದೆ. ಬೀರುಗಳನ್ನು ಮುರಿದುಹಾಕಿರುವ ಕಳ್ಳರು ಅದರಲ್ಲಿದ್ದ ಹಣದ ಜತೆಗೆ ಕಾಗದ ಪತ್ರಗಳನ್ನೂ ಕದ್ದೊಯ್ದಿದ್ದಾರೆ.
ಕುಟುಂಬದಲ್ಲಿ ಬಡತನವಿದ್ದ ಕಾರಣದಿಂದ 7 ತಿಂಗಳ ಹಿಂದೆಯಷ್ಟೇ ಕೆಲಕ್ಕೆ ಸೇರಿದ್ದ ಸಿದ್ದಪ್ಪ ಭಾನುವಾರ ರಾತ್ರಿ 8.30ರ ಸಮಯದಲ್ಲಿ ಕರ್ತವ್ಯಕ್ಕೆ ಬಂದಿದ್ದು, 10 ಗಂಟೆ ಸುಮಾರಿನಲ್ಲಿ ಪತ್ನಿಗೆ ಕರೆ ಮಾಡಿ ಮಾತನಾಡಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡ ಪತ್ನಿ ಹಾಗೂ ಮಗನ ಆಕ್ರಂದನ ಮುಗಿಲುಮುಟ್ಟಿತ್ತು.
ವಿಷಯ ತಿಳಿದ ಕೂಡಲೇ ಬೆರಳಚ್ಚು ತಜ್ಞರು, ಶ್ವಾನದಳದ ಜತೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ಕುಮಾರ್, ಎಎಸ್ಪಿ ಟಿ.ಜೆ.ಉದೇಶ್ ಸೇರಿ ಹಿರಿಯ ಅಧಿಕಾರಿಗಳು ಸಾಕ್ಷ್ಯ ಸಂಗ್ರಹಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕೊಲೆ ಹಾಗೂ ದರೋಡೆ ಸುದ್ದಿ ತಿಳಿದು ನಾಗವಲ್ಲಿ ಸುತ್ತಮುತ್ತಲ ನೂರಾರು ಜನರು ಜಮಾಯಿಸಿದ್ದರು. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೊಸೈಟಿಯಲ್ಲಿ ದರೋಡೆ ನಡೆದಿದ್ದು, 2.60 ಲಕ್ಷ ರೂ. ಹಾಗೂ ಕಾಗದ ಪತ್ರಗಳು ಕಾಣೆಯಾಗಿವೆ, ಕಾವಲುಗಾರ ಸಿದ್ದಪ್ಪನ ಕೊಲೆ ನಡೆದಿದ್ದು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು.
| ರಾಹುಲ್ಕುಮಾರ್ ಜಿಲ್ಲಾ ಪೊಲೀಸ್ ಅಧೀಕ್ಷಕ
ವಿವಾದದ ಸುಳಿಯಲ್ಲಿ ನಾದಬ್ರಹ್ಮ ಹಂಸಲೇಖ: ರಾಜ್ಯದಲ್ಲಿ ಭುಗಿಲೆದ್ದ ಆಕ್ರೋಶ… ಇದೆಂಥಾ ಮಾತು ಹೇಳಿಬಿಟ್ರಿ?
ಭಾವಿ ಪತಿಯ ಹಿಂಸೆ ಸಹಿಸಲಾಗದೆ ಯುವತಿ ಆತ್ಮಹತ್ಯೆ: ಪ್ರೀ ವೆಡ್ಡಿಂಗ್ ಫೋಟೋ ಶೂಟಿಂಗ್ ವೇಳೆ ಆಗಿದ್ದೇನು?
ತಡರಾತ್ರಿ ಕೋಳಾಲಮ್ಮ ದೇಗುಲದ ಶ್ರೀಧರಮ್ಮ ಮತ್ತು ಅರ್ಚಕ ನಿಗೂಢ ಸಾವು! ಸಾವಿನ ಸುತ್ತ ಅನುಮಾನದ ಹುತ್ತ