ನವದೆಹಲಿ: ಬಿಜೆಪಿ ವಿರುದ್ಧ ವ್ಯವಸ್ಥಿತವಾಗಿ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಾಗಿದ್ದ ಕಾಂಗ್ರೆಸ್ ಪಕ್ಷ ಈಗ ತನ್ನವರ ವಿರುದ್ಧವೇ ಅಂತಹ ದಾಳಿ ಆರಂಭಿಸಿದೆ. ಇದು ದುರದೃಷ್ಟಕರ ಎಂದು ಕಾಂಗ್ರೆಸ್ ಪಕ್ಷದ ಹೊಸ ಬಣ ‘ಗ್ರೂಪ್ ಆಫ್ 23’ಯ ಪ್ರಮುಖ ಸದಸ್ಯ ಕಪಿಲ್ ಸಿಬಲ್ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಳವಣಿಗೆಯ ಹಿನ್ನೆಲೆ
ಜಿತಿನ್ ಪ್ರಸಾದ್ ವಿರುದ್ಧ ಲಖಿಂಪುರ್ ಖೇರಿ ಜಿಲ್ಲಾ ಕಾಂಗ್ರೆಸ್ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಪ್ರಸಾದ್ ಗಾಂಧಿ ಕುಟುಂಬ ವಿರೋಧಿಯಾಗಿದ್ದು, ಅವರ ತಂದೆ ಜಿತೇಂದ್ರ ಪ್ರಸದ್ ಕೂಡ ಈ ಹಿಂದೆ ಸೋನಿಯಾ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ನಿರ್ಣಯ ತೆಗೆದುಕೊಂಡಿದೆ.
ಪಕ್ಷವನ್ನು ಮರುಸಂಘಟಿಸಬೇಕಾದ ತುರ್ತು ಅಗತ್ಯ ಇದೆ ಎಂದು ಪ್ರತಿಪಾದಿಸಿ ಪತ್ರ ಬರೆದಿದ್ದ ಗ್ರೂಪ್ ಆಫ್ 23 ಸದಸ್ಯರ ವಿರುದ್ಧ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಹುಲ್ ಗಾಂಧಿ ಈ ಗುಂಪನ್ನು ಪಿತೂರಿ ಮಾಡುವವರ ಗುಂಪು ಎಂದೇ ವ್ಯಾಖ್ಯಾನಿಸಿದ ಬೆನ್ನಿಗೆ, ಭಿನ್ನಮತ ಸಿಬಲ್ ಅವರ ಟ್ವೀಟ್ ಮೂಲಕ ಬಹಿರಂಗವಾಗಿಯೇ ಸ್ಫೋಟವಾಗಿತ್ತು. ಅದರ ಮುಂದುವರಿದ ಭಾಗವಾಗಿ ಇಂದು ಕೂಡ ಸಿಬಲ್ ಅಸಮಾಧಾನ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜತೆ ಸೇರ್ಕೊಂಡು ಕುತಂತ್ರ ಮಾಡ್ತಿದ್ದೀರಲ್ಲ- ಪತ್ರಬರೆದವರ ವಿರುದ್ಧ ರಾಗಾ ಆಕ್ರೋಶ
ಕೇಂದ್ರದ ಮಾಜಿ ಸಚಿವ ಜಿತಿನ್ ಪ್ರಸಾದ್ ಅವರನ್ನು ಈಗ ಉತ್ತರ ಪ್ರದೇಶದಲ್ಲಿ ಅಧಿಕೃತವಾಗಿಯೇ ಟಾರ್ಗೆಟ್ ಮಾಡಲಾಗುತ್ತಿದೆ. ಇದು ದುರದೃಷ್ಟಕರ ಎಂದು ಸಿಬಲ್ ಟ್ವೀಟ್ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನು ಮನಿಷ್ ತಿವಾರಿ ರೀಟ್ವೀಟ್ ಮಾಡಿ ಗಮನಸೆಳೆದಿದ್ದಾರೆ. ಜಿತಿನ್ ಪ್ರಸಾದ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ ಸಿಬಲ್ ಮತ್ತು ತಿವಾರಿ ಅವರ ಟ್ವೀಟ್ಗಳನ್ನು ರೀಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)
ಕುಟುಂಬಕ್ಕೇ ಮತ್ತೆ ಕೀಲಿಕೈ! ಸೋನಿಯಾಗೆ ಕಾಂಗ್ರೆಸ್ ಜೈ; ಹೈಡ್ರಾಮಾ ಬಳಿಕ ಹಿರಿಯರು ಥಂಡಾ