ವಾಷಿಂಗ್ಟನ್: ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಜತೆಗಿನ ರಕ್ತಸಿಕ್ತ ಘರ್ಷಣೆಯಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಹೆಚ್ಚಿನ ಸಂಖ್ಯೆಯ ಯೋಧರು ಸತ್ತಿದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಂಡರೆ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಅಧಿಕಾರಕ್ಕೆ ಕುತ್ತು ಒದಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚೀನಾ ಗಲ್ವಾನ್ ಕಣಿವೆ ಘರ್ಷಣೆಯಲ್ಲಿ ಮಡಿದ ಯೋಧರ ನಿಖರ ಸಂಖ್ಯೆಯನ್ನು ತಿಳಿಸಲು ನಿರಾಕರಿಸುತ್ತಿದೆ ಎನ್ನಲಾಗಿದೆ.
ಅಮೆರಿಕದಲ್ಲಿ ನೆಲೆಸಿರುವ ಕಮ್ಯುನಿಸ್ಟ್ ಪಾರ್ಟಿಯ ಮಾಜಿ ಮುಖಂಡ ಹಾಗೂ ಚೀನಾದ ಬಂಡಾಯಗಾರ ಜಿಯಾನ್ಲಿ ಯಾಂಗ್ ದ ವಾಷಿಂಗ್ಟನ್ ಪೋಸ್ಟ್ಗೆ ಬರೆದಿರುವ ಲೇಖನದಲ್ಲಿ ಈ ವಿಷಯ ತಿಳಿಸಿದ್ದಾರೆ. ಶತ್ರು ಪಾಳೆಯಕ್ಕಿಂತ ಹೆಚ್ಚಿನ ಯೋಧರು ಮಡಿದಿದ್ದಾರೆ ಎಂಬ ಅಂಶ ಬಹಿರಂಗವಾಗುತ್ತಲೇ ಚೀನಾದಲ್ಲಿ ಆಂತರಿಕ ಕ್ಷೋಭೆ ಉಂಟಾಗುತ್ತದೆ. ಜನರು ಸರ್ಕಾರದ ವಿರುದ್ಧ ದಂಗೆ ಏಳುತ್ತಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬೈಕ್ ಬೆಲೆ 60 ಸಾವಿರ- ಫ್ಯಾನ್ಸಿ ನಂಬರ್ಗೆ ಖರ್ಚು ಮಾಡಿದ್ದು ಕೇಳಿದ್ರೆ ಗಾಬರಿ ಬೀಳ್ತೀರಾ!
ಅಷ್ಟೇ ಅಲ್ಲ, ಚೀನಾ ತನ್ನ ಸೇನಾ ಯೋಧರನ್ನು ಗೌರವಯುತವಾಗಿ ನಡೆಸಿಕೊಳ್ಳುವುದಿಲ್ಲ. ಇದರಿಂದ ನೊಂದಿರುವ ನಿವೃತ್ತ ಮತ್ತು ಹಾಲಿ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಯೋಧರು ಕೂಡ ಸರ್ಕಾರದ ವಿರುದ್ಧ ಶಸ್ತ್ರಸಜ್ಜಿತ ದಂಗೆ ಎಬ್ಬಿಸುವ ಸಾಧ್ಯತೆ ಇಲ್ಲದಿಲ್ಲ ಎಂದು ತಿಳಿಸಿದ್ದಾರೆ.
ಚೀನಾ ಕಮ್ಯುನಿಸ್ಟ್ ಪಾರ್ಟಿಗೆ ಪೀಪಲ್ಸ್ ಲಿಬರೇಷನ್ ಆರ್ಮಿ ಬಹುದೊಡ್ಡ ಶಕ್ತಿಯಾಗಿದೆ. ಕರ್ತವ್ಯನಿರತ ಯೋಧರಲ್ಲಿ ಅಸಮಾಧಾನ ಉಂಟಾದರೆ, ಸಹಸ್ರಾರು ನಿವೃತ್ತ ಯೋಧರ ಜತೆಗೂಡಿ ಬಲಿಷ್ಠವಾದ ಪಡೆಯನ್ನು ರೂಪಿಸಿಕೊಂಡು ಕ್ಸಿ ಜಿನ್ಪಿಂಗ್ ವಿರುದ್ಧ ಮುರಿದುಕೊಂಡು ಬೀಳಬಹುದು ಎಂದು ಹೇಳಿದ್ದಾರೆ.
ಪೀಪಲ್ಸ್ ಲಿಬರೇಷನ್ ಆರ್ಮಿಯ ಮಾಜಿ ಯೋಧರು ಸರ್ಕಾರದ ವಿರುದ್ಧ ತಿರುಗಿಬೀಳಲು ಸಮರ್ಥರಾಗಿದ್ದಾರೆ ಎಂಬ ಅರಿವು ಚೀನಾ ಕಮ್ಯುನಿಸ್ಟ್ ಪಾರ್ಟಿಯ ಮುಖಂಡರಲ್ಲಿ ಇದೆ. ಆದ್ದರಿಂದ, ಮಾಜಿ ಯೋಧರು ಪ್ರತಿಭಟನೆ ನಡೆಸುತ್ತಿದ್ದರೂ, ಅವರ ಪ್ರತಿಭಟನೆಯನ್ನು ಹತ್ತಿಕ್ಕಲು ಬಲ ಪ್ರಯೋಗಕ್ಕಾಗಲಿ ಅಥವಾ ಆಡಳಿತಾತ್ಮಕ ಕ್ರಮವನ್ನಾಗಲಿ ಪ್ರಯೋಗಿಸಲು ಕ್ಸಿ ಜಿನ್ಪಿಂಗ್ ಮತ್ತು ಚೀನಾ ಕಮ್ಯುನಿಸ್ಟ್ ಪಾರ್ಟಿಯ ಮುಖಂಡರು ಮುಂದಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಮನೆ ಖಾಲಿ ಮಾಡಮ್ಮ ರೆಹನಾ! ಮಕ್ಕಳ ಮುಂದೆ ಅರೆಬೆತ್ತಲೆಯಾದವಳಿಗೆ ಸಂಕಷ್ಟದ ಮೇಲೆ ಸಂಕಷ್ಟ!