ಹಿರಿಯೂರು: ವಿದ್ಯಾರ್ಥಿಗಳು ಕರೊನಾ ಭಯ ಬಿಟ್ಟು, ಧೈರ್ಯವಾಗಿ ಪರೀಕ್ಷೆ ಬರೆಯಲು ಮಾನಸಿಕವಾಗಿ ಸಿದ್ಧವಾಗಬೇಕು ಎಂದು ತಹಸೀಲ್ದಾರ್ ಸತ್ಯನಾರಾಯಣ ಹೇಳಿದರು.
ನಗರದ ರೋಟರಿ ಕ್ಲಬ್ ಎ.ಕೃಷ್ಣಪ್ಪ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೇಂದ್ರಗಳಲ್ಲಿ ಸುಗಮವಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ನಮ್ಮ ಇಲಾಖೆಯ ಸಂಪೂರ್ಣ ಸಹಕಾರವಿದೆ ಎಂದರು. ಜತೆಗೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಒಂದು ದಿನಕ್ಕೆ ಬೇಕಾಗುವ ಮಾಸ್ಕ್ಗಳನ್ನು ವಿತರಿಸಿದರು.
ಬಿಇಒ ಪಿ.ರಾಮಯ್ಯ ಮಾತನಾಡಿ, 606 ವಿದ್ಯಾರ್ಥಿಗಳು ವಾಹನ ಸೌಲಭ್ಯ ಕೇಳಿದ್ದು, 40 ವಾಹನಗಳು ಲಭ್ಯವಿದೆ. ಅವುಗಳಲ್ಲಿ 29 ಬಸ್ಗಳಿಗೆ ಮಾರ್ಗ ಸೂಚಿಸಿದ್ದು, ಅದರ ನಿರ್ವಹಣೆಗೆ ಹೋಬಳಿಗೊಬ್ಬರನ್ನು ನೋಡಲ್ ಅಧಿಕಾರಿ ಹಾಗೂ ಶಿಕ್ಷಕರನ್ನು ನಿಯೋಜಿಸಿದೆ.
ಪರೀಕ್ಷೆ ಪ್ರಾರಂಭವಾಗುವ ಎರಡು ದಿನ ಮುಂಚೆ ಸ್ಯಾನಿಟೈಸೇಷನ್ ಮಾಡಿಸಲಾಗುವುದು. ಪರೀಕ್ಷೆಗೆ ಬರುವ ಮಕ್ಕಳ ಆರೋಗ್ಯ ತಪಾಸಣೆ, ಮಾಸ್ಕ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವಿದ್ಯಾರ್ಥಿಗೆ 4 ಸೆಟ್ ಮಾಸ್ಕ್ ವಿತರಿಸಲಾಗುವುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದರು.
ಸಿಪಿಐ ರಾಘವೇಂದ್ರ ಮಾತನಾಡಿ, ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಹುಡುಕಲು ಸುಲಭವಾಗುವಂತೆ ಕ್ರಮ ಕೈಗೊಳ್ಳಿ. ಸೂಕ್ತ ರಕ್ಷಣೆ, ಶಾಂತಿ ಕಾಪಾಡಲು ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದರು.
ಖಜನಾಧಿಕಾರಿ ಕಮಲಾ, ತಾಪಂ ಯೋಜನಾಧಿಕಾರಿ ರಾಜಣ್ಣ, ಅಕ್ಷರ ದಾಸೋಹ ಅಧಿಕಾರಿ ಎಲ್.ನಾಗರಾಜಾಚಾರ್, ಶಶಿಧರ್ ಇತರರಿದ್ದರು.
ತಾಲೂಕಿನಲ್ಲಿ 14 ಪರೀಕ್ಷಾ ಕೇಂದ್ರಗಳು ನಿಗದಿ ಮಾಡಲಾಗಿದ್ದು, ಪರಸ್ಪರ ಅಂತರ ಕಾಯ್ದುಕೊಳ್ಳುವಲ್ಲಿ ಆದಿವಾಲ, ಮರಡಿಹಳ್ಳಿ ಮತ್ತು ದೇವರಕೊಟ್ಟ ಉಪಕೇಂದ್ರಗಳನ್ನು ಗುರುತಿಸಲಾಗಿದೆ. ತಾಲೂಕಿನಲ್ಲಿ 3790 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅದರಲ್ಲಿ 1990 ಬಾಲಕರು ಹಾಗೂ 1800 ಬಾಲಕಿಯರಿದ್ದಾರೆ.