ಬಳ್ಳಾರಿ: ಕಾರ್ಮಿಕರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಕೃಷ್ಣರಾಜ ಅಸೋಡೆ ಸೂಚಿಸಿದರು.
ನಗರದ ಮುಂಡ್ರಿಗಿ ಬಳಿ ನಿರ್ಮಿಸುತ್ತಿರುವ ಮಹಾತ್ಮ ಗಾಂಧಿ ಟೌನ್ಶಿಪ್ಗೆ ಬುಧವಾರ ಭೇಟಿ ನೀಡಿ ಕಾರ್ಮಿಕರಿಗೆ ನೀಡಲಾಗಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಲಾಕ್ಡೌನ್ ವೇಳೆ ಕಾರ್ಮಿಕರಿಗೆ ತೊಂದರೆಯಾಗದಂತೆ ಎಲ್ಲ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನೂ ಒದಗಿಸಬೇಕು. ಸಮಸ್ಯೆಗಳಾದರೆ ಕಾರ್ಮಿಕರು ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದರು.
ಎನ್ಸಿಸಿ ಮೈದಾನದಲ್ಲಿರುವ ತಾತ್ಕಾಲಿಕ ಮಾರುಕಟ್ಟೆಗೆ ಭೇಟಿ ನೀಡಿ ,ಸಮಸ್ಯೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಬಗ್ಗೆ ವ್ಯಾಪಾರಿಗಳು ಹಾಗೂ ಸ್ವಯಂ ಸೇವಕರಿಂದ ನ್ಯಾಯಾಧೀಶ ಕೃಷ್ಣರಾಜ ಅಸೋಡೆ ಮಾಹಿತಿ ಪಡೆದುಕೊಂಡರು. ನ್ಯಾಯಾಧೀಶರಾದ ಕಾಸಿಂ ಚೂರಿಖಾನ್, ಅರ್ಜುನ ಮಲ್ಲೂರು, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಚಂದ್ರಶೇಖರ ಐಲಿ, ಕಮಲ್ ಶಾ ಅಲ್ತಾಫ್ ಅಹ್ಮದ್, ಎಂ.ರವಿದಾಸ, ಸಿ.ಎನ್.ರಾಜೇಶ ಇತರರಿದ್ದರು.