ಪಟ್ಟಣಂತಿಟ್ಟ: ಆರಂಭದಿಂದಲೂ ಯಾವುದೇ ರೋಗದ ಲಕ್ಷಣಗಳು ಗೋಚರಿಸದಿದ್ದರೂ ಕೇರಳದ ಇಬ್ಬರು ವ್ಯಕ್ತಿಗಳಿಗೆ ಕರೊನಾ ಪಾಸಿಟಿವ್ ಫಲಿತಾಂಶ ವರದಿಯಾಗಿರುವುದು ಎಚ್ಚರಿಕೆ ಗಂಟೆಯಾಗಿದೆ.
ತಿರವನಂತಪುರದ 100 ಕಿ.ಮೀ ದೂರದಲ್ಲಿರುವ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ಕಂಡುಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಓರ್ವನಿಗೆ 60 ವರ್ಷ ವಯಸ್ಸಾಗಿದ್ದು, ದುಬೈನಿಂದ ಪಟ್ಟಣಂತಿಟ್ಟಕ್ಕೆ ಆಗಮಿಸಿದ್ದ. ಮತ್ತೋರ್ವಳು 19 ವರ್ಷದ ವಿದ್ಯಾರ್ಥಿನಿಯಾಗಿದ್ದು, ದೆಹಲಿಯಿಂದ ಆಗಮಿಸಿದ್ದಳು. ಎರಡು ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಕೇರಳ ರಾಜ್ಯ ಸರ್ಕಾರಕ್ಕೆ ಅಕ್ಷರಶಃ ಚಿಂತೆಗೀಡಾಗಿದೆ.
ಇದೊಂದು ಎಚ್ಚರಿಕೆ ಗಂಟೆಯಾಗಿದ್ದು, ಇವರೊಂದಿಗೆ ಸಂಪರ್ಕದಲ್ಲಿದ್ದ ಸಾವಿರಾರು ಅಮಾಯಕರು ಹಾಗೂ ಅಪರಿಚಿತರು ಕೂಡ ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ. ಅಪಯಾಕಾರಿ ಅಂಗತಿಯೆಂದರೆ ಇಬ್ಬರು ವ್ಯಕ್ತಿಗಳೂ ತಮ್ಮ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದಾರೆ. ಈ ವೇಳೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ ನಾವಿನ್ನು ಎಚ್ಚರಿಕೆಯ ಹಾದಿಯಲ್ಲೇ ಸಾಗಬೇಕೆಂಬುದು ಇದರರ್ಥವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಬಿ ನೂಹ್ ತಿಳಿಸಿದ್ದಾರೆ.
60 ವರ್ಷದ ವೃದ್ಧ ಮಾರ್ಚ್ 19 ರಂದು ದುಬೈನ ಶಾರ್ಜಾದಿಂದ ತಿರುವನಂತಪುರಕ್ಕೆ ಆಗಮಿಸಿದ್ದ. ದುಬೈ ಹೆಚ್ಚು ಕರೊನಾ ಬಾಧಿತ ಪ್ರದೇಶದಿಂದ ಬಂದಿದ್ದ ವೃದ್ಧನನ್ನು ಅಂದಿನಿಂದಲೇ ಏಪ್ರಿಲ್ 6ರವರೆಗೆ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಅದಾದ ಬಳಿಕವೂ ಪಾಸಿಟಿವ್ ಫಲಿತಾಂಶ ಬಂದಿರುವುದು ಅಧಿಕಾರಿಗಳಿಗೆ ತಲೆಬಿಸಿಯಾಗಿದೆ.
ಇನ್ನು ವಿದ್ಯಾರ್ಥಿನಿ ಮಾರ್ಚ್ 15ರಂದು ದೆಹಲಿಯಿಂದ ಟ್ರೈನ್ ಮೂಲಕ ಮಾರ್ಚ್ 17ಕ್ಕೆ ಎರ್ನಾಕುಲಂಗೆ ಬಂದಿಳಿದಿದ್ದಳು. ಬಳಿಕ ಬಸ್ ಮೂಲಕ ತವರಿಗೆ ತೆರಳಿ, ಕ್ವಾರಂಟೈನ್ನಲ್ಲಿದ್ದಳು. ಕ್ವಾರಂಟೈನ್ ಮುಗಿದ ಬಳಿಕವೂ ರೋಗ ಲಕ್ಷಣಗಳು ಕಾಣಿಸಿಕೊಳ್ಳದೇ ಕರೊನಾ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಏಪ್ರಿಲ್ 4ರಂದು ಆಕೆ ಆಸ್ಪತ್ರೆಗೆ ದಾಖಲಾದಳು.
ಇದೀಗ ಅಧಿಕಾರಿಗಳು ಸೋಂಕಿತರ ಸಂಪರ್ಕದಲ್ಲಿದ್ದವರ ಜಾಲ ಪತ್ತೆಹಚ್ಚಲು ಟ್ರಾವೆಲ್ ಇತಿಹಾಸ ಮೊರೆಹೋಗಿದ್ದು, ತಲೆನೋವಾಗಿ ಪರಿಣಮಿಸಿದೆ. (ಏಜೆನ್ಸೀಸ್)
ಕರೊನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿಗೆ ಪ್ರಮುಖ 5 ಸಲಹೆ ನೀಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ