ಬೆಳಗಾವಿ: ನಗರದ ಕರ್ನಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಮಾ.13ರಿಂದ 15ರ ವರೆಗೆ ಎಂ.ಕೆ.ನಂಬಿಯಾರ್ ಸ್ಮಾರಕ ವತಿಯಿಂದ ‘ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ’ ಆಯೋಜಿಸಲಾಗಿದೆ ಎಂದು ಆರ್.ಎಲ್. ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್ಮನ್ ಎಸ್.ವಿ.ಗಣಾಚಾರಿ ಮಾಹಿತಿ ನೀಡಿದ್ದಾರೆ.
ನಗರದ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ಪರ್ಧೆಯಲ್ಲಿ ದೇಶದ 11 ರಾಜ್ಯಗಳ 99 ಕಾನೂನು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಇದರಲ್ಲಿ 66 ಕಾನೂನು ವಿದ್ಯಾರ್ಥಿನಿಯರು ಭಾಗವಹಿಸುತ್ತಿರುವುದು ವಿಶೇಷ ಎಂದರು.
ಅಣಕು ಸ್ಪರ್ಧೆಯಲ್ಲಿ ಪ್ರಮುಖವಾಗಿ ಶಾಸಕರ ಅನರ್ಹತೆ ವಿಷಯ ಕುರಿತು ವಾದ-ಪ್ರತಿವಾದ ನಡೆಯಲಿದೆ. ಅಲ್ಲದೆ, ಸ್ಪರ್ಧೆಯಲ್ಲಿ ಅನರ್ಹ ಶಾಸಕರ ಪ್ರಕರಣಗಳ ಕುರಿತು ಸುಪ್ರೀಂಕೋರ್ಟ್ ಮತ್ತು ವಿವಿಧ ಹೈಕೋರ್ಟ್ ಹೊರಡಿಸಿರುವ ಆದೇಶಗಳೂ ಪ್ರಸ್ತಾಪವಾಗಲಿವೆ. ಸಾರ್ವಜನಿಕರಿಗೆ ಮತ್ತು ಪಾಲಕರಿಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಆರ್.ಎಲ್.ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಆರ್.ಎಸ್.ಮುತಾಲಿಕ ದೇಸಾಯಿ, ಪ್ರಾಂಶುಪಾಲ ಡಾ. ಎ.ಎಚ್.ಹವಾಲ್ದಾರ, ಸತೀಶ ಆನಿಖಿಂಡಿ, ಪ್ರೊ.ಡಿ.ಎಂ.ವಾಘ್ ಸೇರಿ ಇನ್ನಿತರರು ಇದ್ದರು.
ಸ್ಪರ್ಧೆಗೆ ನ್ಯಾ.ಶ್ಯಾಮಪ್ರಸಾದ ಚಾಲನೆ: ಮಾ. 13ರಂದು ಸಂಜೆ 5.30ಕ್ಕೆ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ ಉದ್ಘಾಟಿಸಲಿದ್ದಾರೆ. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾ.ಆರ್.ಜೆ.ಸತೀಶಸಿಂಗ್, ಕರ್ನಾಟಕ ಕಾನೂನು ಸಂಸ್ಥೆಯ ಚೇರ್ಮನ್ ಪಿ.ಎಸ್. ಸಾವಕಾರ, ಅಧ್ಯಕ್ಷ ಅನಂತ ಮಂಡಗಿ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಾ.15 ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ.ಬಿ.ಎ.ಪಾಟೀಲ, ಕೇರಳ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾ.ಎಸ್.ಆರ್.ಬನ್ನೂರಮಠ, ಎ.ಎಸ್.ಪಾಶ್ಚಾಪುರೆ, ಕರ್ನಾಟಕ ಕಾನೂನು ಸಂಸ್ಥೆಯ ಚೇರ್ಮನ್ ಪಿ.ಎಸ್.ಸಾವಕಾರ ಸೇರಿ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು.
33 ತಂಡ, ವಿಜೇತರಿಗೆ 30 ಸಾವಿರ ರೂ. ಬಹುಮಾನ
ಆರ್.ಎಲ್.ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿ, ವಕೀಲ, ಅಟೋರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು ತಮ್ಮ ತಂದೆಯ ಹೆಸರಿನಲ್ಲಿ ಸ್ಥಾಪಿಸಿರುವ ಎಂ.ಕೆ. ನಂಬಿಯಾರ್ ನಿಧಿಯ ಸಹಾಯದಿಂದ ಪ್ರತಿವರ್ಷ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಈ ವರ್ಷ ಕರ್ನಾಟಕದ-17, ಮಹಾರಾಷ್ಟ್ರದ-4, ತಮಿಳುನಾಡು-3, ಉತ್ತರ ಪ್ರದೇಶ-2, ತೆಲಂಗಾಣ, ಪಶ್ಚಿಮ ಬಂಗಾಳ, ಓಡಿಸಾ, ಬಿಹಾರ, ಗೋವಾ, ಆಂಧ್ರ ಪ್ರದೇಶ ಹಾಗೂ ಮಧ್ಯ ಪ್ರದೇಶ ತಲಾ ಒಂದರಂತೆ ಒಟ್ಟೂ 33 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. 40 ವಕೀಲರು ಹಾಗೂ ಶೈಕ್ಷಣಿಕ ತಜ್ಞರು ಈ ಸ್ಪರ್ಧೆಯ ನ್ಯಾಯಾಧೀಶರಾಗಿ ಪಾಲ್ಗೊಳ್ಳುತ್ತಿದ್ದಾರೆ. ವಿಜೇತ ಪ್ರಥಮ ಸ್ಥಾನಕ್ಕೆ 30,000 ರೂ., ದ್ವಿತೀಯ 20,000 ರೂ. ಹಾಗೂ ಉತ್ತಮ ಅಣಕು ಮಾಡಿದ ಪುರುಷ ಸ್ಪರ್ಧಿಗೆ 10,000 ರೂ., ಮಹಿಳಾ ಸ್ಪರ್ಧಿಗೆ ಮತ್ತು ಉತ್ತಮ ಮೆಮೋರಿಯಲ್ (ಬರಹ ರೂಪದಲ್ಲಿ) ನೀಡಿದವರಿಗೆ ತಲಾ 10,000 ರೂ. ಬಹುಮಾನ ವಿತರಿಸಲಾಗುವುದು ಎಂದು ಎಸ್.ವಿ.ಗಣಾಚಾರಿ ತಿಳಿಸಿದರು.