ಶಿರ್ಡಿ(ಮಹಾರಾಷ್ಟ್ರ): ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮರಾಠವಾಡದಲ್ಲಿ ಶಿರ್ಡಿ ಸಾಯಿಬಾಬಾ ಅವರ ಜನ್ಮಸ್ಥಳವೆಂದೇ ಜನಜನಿತವಾಗಿರುವ ಪಥ್ರಿ ಪ್ರದೇಶದ ಅಭಿವೃದ್ಧಿಗಾಗಿ 100 ಕೋಟಿ ರೂಪಾಯಿ ಮೀಸಲಿಟ್ಟ ವಿಚಾರ ವಿವಾದಕ್ಕೀಡಾಗಿದೆ.
ಹತ್ತೊಂಬತ್ತನೇ ಶತಮಾನದ ಸಂತ ಸಾಯಿಬಾಬಾ ಅವರ ಜನ್ಮಸ್ಥಳಕ್ಕೆ ಸಂಬಂಧಿಸಿದ ವಿವಾದ ಭುಗಿಲೆದ್ದಿದೆ. ಅಲ್ಲದೆ, ಮುಖ್ಯಮಂತ್ರಿಯವರ ನಡೆ, ಹೇಳಿಕೆ ವಿರೋಧಿಸಿ ಶಿರ್ಡಿ ಪಟ್ಟಣದಲ್ಲಿ ಸ್ಥಳೀಯರು ಭಾನುವಾರ ಬಂದ್ ಆಚರಿಸುತ್ತಿದ್ದಾರೆ.
ಶಿರ್ಡಿ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿ ಬಿಜೆಪಿಯ ರಾಧಾಕೃಷ್ಣ ವಿಖೆ ಪಾಟೀಲ್ ನೇತೃತ್ವದಲ್ಲಿ ಶನಿವಾರ ಸಭೆ ನಡೆಸಿ, ಬಾನುವಾರದ ಬಂದ್ ಘೋಷಿಸಿದ್ದಾರೆ. ವಿವಾದ ಬಗೆಹರಿಸಲು ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಠಾಕ್ರೆ ಭರವಸೆ ನೀಡಿದ್ದು, ಬಂದ್ ನಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದರು.
ಆದರೆ, ಭಾನುವಾರ ಪ್ರತಿಭಟನಾರ್ಥವಾಗಿ ಬಂದ್ ಆಚರಿಸಲ್ಪಟ್ಟಿದ್ದು, ಖಾಸಗಿ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು ಬಂದ್ ಆಚರಿಸಿವೆ. ಆದರೆ, ಶಿರ್ಡಿ ದೇವಸ್ಥಾನ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಸಂಸ್ಥೆಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ.
ಸಿಎಂ ಜತೆಗೆ ಸಭೆ ನಾಳೆ : ಶಿರ್ಡಿ ವಿವಾದಕ್ಕೆ ಸಂಬಂಧಿಸಿದ ಸಿಎಂ ಉದ್ಧವ್ ಠಾಕ್ರೆ ಸೋಮವಾರ ತಮ್ಮ ಸಚಿವಾಲಯದಲ್ಲಿ ಸಭೆ ಕರೆದಿದ್ದಾರೆ. ಸ್ಥಳೀಯ ಪ್ರಮುಖರನ್ನೂ ಸಭೆಗೆ ಆಹ್ವಾನಿಸಿದ್ದಾರೆ. ಪಥ್ರಿಯ ಜನಪ್ರತಿನಿಧಿಗಳ ಜತೆಗೆ ಪ್ರತ್ಯೇಕ ಸಭೆಯನ್ನೂ ಮುಖ್ಯಮಂತ್ರಿ ನಡೆಸಲಿದ್ದಾರೆ. (ಏಜೆನ್ಸೀಸ್)