ಸಾಗರ: ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮಹಿಳೆಯರು ಸಾಮಾಜಿಕ ಸಂಘಟನೆಗಳ ಮೂಲಕ ಸಂಘಟಿತವಾಗಿ ತೊಡಗಿಕೊಳ್ಳಬೇಕು. ಗುಂಪಾಗಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಲು ಚಿಂತನೆ ನಡೆಸಬೇಕು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಮತ್ತು ತಯಾರಿಕಾ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಮಹಿಳಾ ಸಂಘಟನೆಗಳ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯ ನೆರವು ನೀಡಲಾಗುತ್ತಿದೆ ಎಂದರು.
ಆನಂದಪುರದ ಮಲಂದೂರಿನಲ್ಲಿದ್ದ ಪೌಷ್ಟಿಕ ಅಹಾರ ತರಬೇತಿ ಮತ್ತು ತಯಾರಿಕಾ ಕೇಂದ್ರವನ್ನು ಸಾಗರಕ್ಕೆ ಸ್ಥಳಾಂತರಿಸಿರುವುದರಿಂದ ಮಹಿಳೆಯರು ಧೈರ್ಯವಾಗಿ ಕೆಲಸ ಮಾಡಲು ಅವಕಾಶವಾಗಿದೆ. ಆನಂದಪುರದಲ್ಲಿ ಘಟಕ ನಡೆಸಲು 35ಸಾವಿರ ರೂ. ಬಾಡಿಗೆ ಕೊಡಬೇಕಾಗಿತ್ತು. ಎಪಿಎಂಸಿ ಪ್ರಾಂಗಣದಲ್ಲಿ ಕೇವಲ 6 ಸಾವಿರ ರೂ. ಬಾಡಿಗೆ ನಿಗದಿಗೊಳಿಸಲಾಗಿದೆ. ಇದರಿಂದ ಮಹಿಳೆಯರಿಗೆ ಬಾಡಿಗೆ ಹೊರೆ ತಪ್ಪಿದಂತಾಗಿದೆ. ಈ ಘಟಕದ ನಿರ್ವಹಣೆಯಿಂದ 20 ಕುಟುಂಬಗಳಿಗೆ ಅನುಕೂಲವಾಗಲಿದೆ. ಆನಂದಪುರದಿಂದ ಸಾಗರಕ್ಕೆ ಬರಲು ಶೇ. 50 ಬಸ್ ಪ್ರಯಾಣ ದರ ಕಡಿಮೆ ಮಾಡಿಸುವ ಸಂಬಂಧ ಬಸ್ ಮಾಲೀಕರ ಜತೆ ಮಾತನಾಡುತ್ತೇನೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಘಟಕಕ್ಕೆ ಪ್ರತಿತಿಂಗಳು ಹಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳನ್ನು ಕೋರಲಾಗುವುದು ಎಂದು ಹೇಳಿದರು.
ಘಟಕದ ಅಧ್ಯಕ್ಷೆ ಸುಧಾ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರಾದ ಕೆ.ಆರ್.ಗಣೇಶಪ್ರಸಾದ್, ಡಿ.ತುಕಾರಾಮ್ ಭಾವನಾ, ಮಧುರಾ, ಉಷಾ ಗುರುಮೂರ್ತಿ, ಪ್ರೇಮಾ ಸಿಂಗ್, ಶಂಕರ ಅಳ್ವಿಕೋಡಿ, ಲಿಂಗರಾಜ್ ಬಿ.ಎಚ್., ಮೈತ್ರಿ ವಿ. ಪಾಟೀಲ್, ಕುಸುಮಾ ಸುಬ್ಬಣ್ಣ, ಸವಿತಾ ವಾಸು, ತಾಲ್ಲೂಕು ಪಂಚಾಯ್ತಿ ಸದಸ್ಯ ದೇವೇಂದ್ರಪ್ಪ, ಶಿಶು ಅಭಿವೃದ್ದಿ ಅಕಾರಿ ನಾಗರತ್ನ ಇನ್ನಿತರರು ಹಾಜರಿದ್ದರು.