ವಿರಾಜಪೇಟೆ: ವಿರಾಜಪೇಟೆ ಸುತ್ತಮುತ್ತ ಎರಡು ದಿನಗಳಿಂದ ಮಳೆಯಾಗುತ್ತಿದ್ದು ಬುಧವಾರ ರಾತ್ರಿ ಸುರಿದ ಗಾಳಿ ಮಳೆಗೆ ಬಾಳೆ ಗಿಡಗಳು ಹಾನಿಯಾಗಿವೆ.
ವಿರಾಜಪೇಟೆ ಸಮೀಪದ ಮಗ್ಗುಲ ಗ್ರಾಮದ ರೈತ ಚೋಕಂಡ ಮಾದಪ್ಪ ಬೆಳೆದಿದ್ದ 1,200 ಬಾಳೆ ಗಿಡಗಳು ಗಾಳಿ ಮಳೆಗೆ ಧರೆಗುರುಳಿವೆ. ಇನ್ನೇನು ಬಾಳೆ ಕೊಯ್ಯುವ ಹಂತದಲ್ಲಿದೆ ಎನ್ನುವಷ್ಟರಲ್ಲಿ ಬೆಳೆ ಹಾನಿ ಸಂಭವಿಸಿದೆ. ಇದರಿಂದ ಬೆಳೆಗಾರ ಕಂಗಾಲಾಗಿದ್ದಾರೆ.
ಸಾಲ ಮಾಡಿ ಬಾಳೆ ಬೆಳೆಸಿದ್ದೇನೆ. ಮುಂದಿನ ತಿಂಗಳ ಕೊನೆಯಲ್ಲಿ ಬಾಳೆ ಕೊಯ್ಯಲು ಪ್ರಾರಂಭಿಸಬೇಕಿತ್ತು. ಇದೀಗ ಗಾಳಿ-ಮಳೆಯಿಂದ ಬಾಳೆ ಗಿಡಗಳು ಧರೆಗೆ ಉರುಳಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಿದೆ ಎಂದು ಬೆಳೆಗಾರ ಚೋಕಂಡ ಮಾದಪ್ಪ ಅಳಲನ್ನು ತೋಡಿಕೊಂಡರು. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.