ಶಿವಮೊಗ್ಗ: ಬಂಡಾಯ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಕೆಗೆ ಅವಕಾಶ ಕಲ್ಪಿಸುವಂತೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ಕೇವಿಯೆಟ್ ಸಲ್ಲಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಅವರನ್ನು ಎದುರು ಪಾರ್ಟಿಯನ್ನಾಗಿಸಿದ್ದಾರೆ. ಸ್ಪರ್ಧೆ ಘೋಷಣೆ ಬಳಿಕ ಕೆ.ಎಸ್.ಈಶ್ವರಪ್ಪ, ನನ್ನ ಹೃದಯದಲ್ಲಿ ಮೋದಿ ಇದ್ದಾರೆ ಎಂದು ಹೇಳಿದ್ದರು. ಮನೆಯ ಆವರಣದಲ್ಲೇ ಚುನಾವಣಾ ಕಚೇರಿ ತೆರೆದು ಮೋದಿ ಅವರ ಎರಡು ಬೃಹತ್ ಕಟೌಟ್ ಅಳವಡಿಸಿದ್ದಾರೆ. ಮುಂದೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಮುನ್ನೆಚ್ಚರಿಕೆಯಿಂದ ಕೇವಿಯೆಟ್ ಸಲ್ಲಿಸಿದ್ದಾರೆ.
ಬಿ ಫಾರ್ಮ್ ಪಡೆದವರು ಮಾತ್ರ ಆ ಪಕ್ಷದ ಅಧಿಕೃತ ಅಭ್ಯರ್ಥಿ ಎನಿಸಿಕೊಳ್ಳುತ್ತಾರೆ. ಅವರಿಗೆ ಆ ಪಕ್ಷದ ಚಿಹ್ನೆ, ನಾಯಕರ ಫೋಟೋ ಬಳಸಿಕೊಳ್ಳಲು ಅವಕಾಶವಿರುತ್ತದೆ. ಹೀಗಾಗಿ ಈಶ್ವರಪ್ಪ ಮೋದಿ ಫೋಟೋ ಬಳಸುತ್ತಿರುವ ಬಗ್ಗೆ ತಕರಾರು ಶುರುವಾಗಿದೆ. ಈಶ್ವರಪ್ಪ ಮೋದಿ ಚಿತ್ರ ಬಳಸುತ್ತಿರುವುದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಈಶ್ವರಪ್ಪ, ಮೋದಿ ಅವರ ಮನೆ ಆಸ್ತಿಯೇ? ಎಂದು ಪ್ರಶ್ನಿಸಿದ್ದರು. ಇದೀಗ ಮೋದಿ ಭಾವಚಿತ್ರದ ವಿಚಾರ ಕೋರ್ಟ್ ಮೆಟ್ಟಿಲೇರಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಪ್ರತಿಕ್ರಿಯಿಸಿ, ನರೇಂದ್ರ ಮೋದಿ ಫೋಟೋ ಬಳಕೆ ಮಾಡುವ ಅವಕಾಶ ಪಕ್ಷ ಹಾಗೂ ಅಧಿಕೃತ ಅಭ್ಯರ್ಥಿಗೆ ಮಾತ್ರ ಇರುತ್ತದೆ. ಈ ವಿಷಯದಲ್ಲಿ ನಾವು ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.