ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಅನಂತನಾಗ್-ರಾಜೌರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಇದನ್ನೂ ಓದಿ: ಬರಸಂಕಷ್ಟಕ್ಕೆ ಸ್ಪಂದಿಸದ ಬಿಜೆಪಿಗೆ ಮತ ನೀಡಬೇಕೆ?: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಕಾಂಗ್ರೆಸ್ ತೊರೆದ ನಂತರ 2022 ರಲ್ಲಿ ಸ್ಥಾಪಿಸಿದ ತಮ್ಮ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಇಂದಿನ ಡಿಪಿಎಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷದ ಮುಖ್ಯ ವಕ್ತಾರ ಸಲ್ಮಾನ್ ನಿಜಾಮಿ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಆಜಾದ್ ಅವರು ಉಧಂಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿ ನಾಯಕ ಜಿತೇಂದ್ರ ಸಿಂಗ್ ಎದುರು ಸೋತಿದ್ದರು. ಬಿಜೆಪಿ ಈ ವರ್ಷ ಮಾಜಿ ರಾಜ್ಯ ಸಚಿವ ಜಿಎಂ ಸರೂರಿಯನ್ನು ಉಧಂಪುರದಿಂದ ಕಣಕ್ಕಿಳಿಸಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಅನಂತನಾಗ್-ರಾಜೌರಿ ಕ್ಷೇತ್ರದಿಂದ ನ್ಯಾಷನಲ್ ಕಾನ್ಫರೆನ್ಸ್ನ ಹಸನೈನ್ ಮಸೂದಿ ಗೆದ್ದಿದ್ದರು. ಆ ಪಕ್ಷವು ಈ ಬಾರಿ ಮೈನ್ ಅಲ್ತಾಫ್ ಅವರನ್ನು ಕಣಕ್ಕಿಳಿಸಿದೆ. ಇದು ಪ್ರತಿಷ್ಠೆಯ ಸ್ಥಾನವಾಗಿದ್ದು, ಚತುಷ್ಕೋನ ಹೋರಾಟ ಕಾಣಬಹುದು. ಭಾರತೀಯ ಜನತಾ ಪಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಕೂಡ ಕಣದಲ್ಲಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯು ಮೊದಲ ಐದು ಹಂತಗಳಲ್ಲಿ ಏಪ್ರಿಲ್ 19 (ಉಧಂಪುರ), ಏಪ್ರಿಲ್ 26 (ಜಮ್ಮು), ಮೇ 7 (ಅನಂತನಾಗ್-ರಾಜೌರಿ), ಮೇ 13 (ಶ್ರೀನಗರ) ಮತ್ತು ಮೇ 20 (ಬಾರಾಮುಲ್ಲಾ) ರಂದು ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.