ಎನ್.ಆರ್.ಪುರ: ಪೌಷ್ಟಿಕಾಂಶಯುಕ್ತ ಹಾಗೂ ಗುಣಮಟ್ಟದ ಆಹಾರ ಸೇವನೆ ಕೊರತೆಯಿಂದ ಅನಿಮಿಯಾ ಉಂಟಾಗಿ ಏಕಾಗ್ರತೆ ಕೊರತೆಯಿಂದ ಮಕ್ಕಳಿಗೆ ಶಿಕ್ಷಣದಲ್ಲಿ ಆಸಕ್ತಿ ಕ್ಷೀಣಿಸುವ ಸಾಧ್ಯತೆಯಿದೆ ಎಂದು ಬಿಇಒ ಕೆ.ಆರ್.ಪುಷ್ಪಾ ಹೇಳಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ರಾಗಿ ಹೆಲ್ತ್ ಮಿಕ್ಸ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದೃಢ ದೇಹದಲ್ಲಿ ಮಾತ್ರ ಸ್ವಸ್ಥ ಮನಸ್ಸಿರಲು ಸಾಧ್ಯ ಎಂದರು.
ಸೊಪ್ಪು, ತರಕಾರಿ, ಬೆಳೆಕಾಳುಗಳ ಸೇವನೆಯಿಂದ ಪೌಷ್ಟಿಕಾಂಶ ಕೊರತೆ ನೀಗುತ್ತದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಸಮಸ್ಯೆ ನೀಗಿಸಲು, ಶಿಕ್ಷಣದ ಬಗ್ಗೆ ಆಸಕ್ತಿ ಬೆಳೆಸಲು ಹಾಗೂ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಿಸಲು ಮಧ್ಯಾಹ್ನ ಬಿಸಿಯೂಟ, ಹಾಲು, ಮೊಟ್ಟೆ,ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸುತ್ತಿದೆ. ಪ್ರಸ್ತುತ ವಾರಕ್ಕೆ ಮೂರು ದಿನ ಗುಣಮಟ್ಟದ ರಾಗಿ ಮಾಲ್ಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧನಂಜಯ ಮೇಧೂರ ಮಾತನಾಡಿ, ಈ ಹಿಂದೆ 1ರಿಂದ 8ನೇ ತರಗತಿವರೆಗೆ ಪೂರಕ ಪೌಷ್ಟಿಕಾಂಶ ಆಹಾರವಾಗಿ ಬೇಯಿಸಿದ ಮೊಟ್ಟೆ ವಿತರಿಸಲಾಗುತ್ತಿತ್ತು. 2023-24ರಿಂದ 9 ಮತ್ತು 10ನೇ ತರಗತಿ ಮಕ್ಕಳಿಗೂ ಇದನ್ನು ವಿಸ್ತರಿಸಲಾಗಿದೆ. ಹಲವಾರು ಮಕ್ಕಳಲ್ಲಿ ಅನಿಮಿಯಾ ಹಾಗೂ ಪೋಷಕಾಂಶದ ಕೊರತೆ ಕಂಡುಬಂದಿದ್ದರಿಂದ ವಾರಕ್ಕೆ ಮೂರು ದಿನಗಳ ಕಾಲ ರಾಗಿ ಹೆಲ್ತ್ ಮಿಕ್ಸ್ ವಿತರಿಸಲಾಗುತ್ತಿದೆ ಎಂದರು.
ಕೆಪಿಎಸ್ ಪ್ರಾಚಾರ್ಯೆ ಸರಸ್ವತಿ ಮಾತನಾಡಿ, ಮಕ್ಕಳು ಜಂಕ್ಫುಡ್ ಸೇವಿಸಬಾರದು. ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಕೆಪಿಎಸ್ ಕಾರ್ಯಾಧ್ಯಕ್ಷ ಲಕ್ಷ್ಮಣ್ ಶೆಟ್ಟಿ ಮಾತನಾಡಿ, ಸರ್ಕಾರಿ ಶಾಲೆಗೆ ಬರುವ ಮಕ್ಕಳ ಬಗ್ಗೆ ಕಾಳಜಿಯಿಂದ ಬಿಸಿಯೂಟ, ಮೊಟ್ಟೆ, ಹಾಲು, ರಾಗಿ ಮಾಲ್ಟ್ ವಿತರಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಮಕ್ಕಳಲ್ಲಿ ಆರೋಗ್ಯವಿದ್ದಾಗ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪಪಂ ಸದಸ್ಯರಾದ ಸೈಯದ್ ವಸೀಂ, ಜುಬೇದಾ, ಎಸ್ಡಿಎಂಸಿ ಸದಸ್ಯರಾದ ಅಬೂಬಕರ್, ಸಲೀಂ, ಬಿಆರ್ಸಿ ಸೇವಾನಾಯಕ್, ಇಸಿಒ ಸಂಗೀತಾ, ರಂಗಪ್ಪ, ಸಿಆರ್ಪಿ ದೇವರಾಜ್, ಅನಂತಪ್ಪ, ಶಿಕ್ಷಕರಾದ ವಾಗ್ದೇವಿ, ಕಿರಣ್ಕುಮಾರ್, ಸಂದೀಪ್ಕುಮಾರ್, ವಾಗ್ದೇವಿ, ವಿಜು ಇತರರಿದ್ದರು.