ನವದೆಹಲಿ: ಭಾರತ ಆಯೋಜಿಸಿರುವ ಏಕದಿನ ವಿಶ್ವಕಪ್ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಲೀಗ್ ಹಂತದ ಪಂದ್ಯಗಳು ಮುಗಿದು ಸೆಮಿಫೈನಲ್ ಫೀವರ್ ಎಲ್ಲೆಡೆ ಶುರುವಾಗಿದೆ. ನಾಳೆ ಮೊದಲ ಸೆಮಿಫೈನಲ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಫೈನಲ್ ಸುತ್ತಿಗೇರಲು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಕಾದಾಡಲಿವೆ.
ಆದರೆ, ಭಾರತದಲ್ಲಿ ತೀರ ಪ್ರದೇಶಗಳಲ್ಲಿ ಮಾನ್ಸೂನ್ ಕಾರಣದಿಂದಾಗಿ ನಿರ್ಣಾಯಕ ಹಂತದ ಪಂದ್ಯಗಳಿಗೆ ಮಳೆ ಭೀತಿಯು ಕಾಡತೊಡಗಿದೆ. ಐತಿಹಾಸಿಕ ಟೂರ್ನಿ ಮುಗಿಲು ಇನ್ನೂ ಎರಡೇ ಹೆಜ್ಜೆ ಬಾಕಿ ಇದೆ. ಈ ಸಂದರ್ಭದಲ್ಲಿ ಮಳೆ ಎದುರಾದರೆ ಕ್ರೀಡಾಭಿಮಾನಿಗಳಿಗೆ ಅದಕ್ಕಿಂತ ದೊಡ್ಡ ನಿರಾಸೆ ಬೇರೊಂದಿಲ್ಲ. ಮಳೆ ಬರದಿರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ಮಳೆ ಬಂದರೆ ಪಂದ್ಯ ರದ್ದಾಗಲಿದೆಯಾ? ಫೈನಲ್ ಪಂದ್ಯಕ್ಕೆ ತಂಡವನ್ನು ಹೇಗೆ ನಿರ್ಧರಿಸುತ್ತಾರೆ? ಮಳೆ ಬಂದರೂ ಮತ್ತೊಂದು ದಿನ ಪಂದ್ಯ ನಡೆಯಲಿದೆಯಾ? ಸಮಿಫೈನಲ್ಗೆ ವರಣನ ಅಡ್ಡಿಯಾದರೆ ಫೈನಲ್ ಆಯ್ಕೆಗೆ ಏನೆಲ್ಲ ದಾರಿಗಳಿವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮೊದಲನೆಯದಾಗಿ ಸಮಿಫೈನಲ್ ಪಂದ್ಯಗಳು ಅತ್ಯಂತ ನಿರ್ಣಾಯಕ ಘಟ್ಟವಾಗಿರುವುದರಿಂದ ಒಂದು ವೇಳೆ ಮಳೆ ಬಂದರೂ ಐಸಿಸಿ ನಿಯಮದಂತೆ ಪಂದ್ಯ ನಡೆಯುವುದು ಖಚಿತ. ಆದರೆ, ಮಳೆ ಆಡಲು ಅವಕಾಶವನ್ನೇ ಕೊಡದಿದ್ದಾಗ ಐಸಿಸಿ ಜಾರಿ ತಂದಿರು ಕೆಲವು ನಿಯಮಗಳ ಪ್ರಕಾರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಆ ನಿಯಮಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
* ನಿಗದಿಯಾದ ದಿನದಂದು ಮಳೆಯಿಂದ ಸಮಿಫೈನಲ್ ರದ್ದಾದರೆ, ಮೀಸಲು ದಿನದಲ್ಲಿ ಪಂದ್ಯವನ್ನು ನಡೆಸಲಾಗುತ್ತದೆ. ಅಂದರೆ, ಭಾರತ ಮತ್ತು ನ್ಯೂಜಿಲೆಂಡ್ ಬುಧವಾರ (ನ.15) ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಮಳೆ ಬಿಡುವು ಕೊಡದೆ ನಿರಂತರವಾಗಿ ಸುರಿದು ಪಂದ್ಯವೇ ರದ್ದಾದರೆ, ಮರುದಿನ ಅಂದರೆ ಗುರುವಾರ (ನ.16) ಮತ್ತೆ ಸಮಿಫೈನಲ್ ಪಂದ್ಯ ನಡೆಯಲಿದೆ.
* ಸೆಮಿಫೈನಲ್ ಪಂದ್ಯಗಳಿಗೆ ಹೆಚ್ಚುವರಿಯಾಗಿ ಎರಡು ಗಂಟೆಯನ್ನು ನಿಗದಿ ಮಾಡಲಾಗಿದೆ. ಅಂದರೆ, ಪಂದ್ಯವು 2 ಗಂಟೆಗೆ ಆರಂಭವಾಗಿ 5 ಗಂಟೆ ಮಳೆಯಿಂದ ಸ್ಥಗಿತಗೊಂಡರೆ ಮತ್ತು ಮಳೆ ನಿಂತು ಮತ್ತೆ 7 ಗಂಟೆಗೆ ಆರಂಭವಾದರೆ, ಯಾವುದೇ ಓವರ್ಗಳನ್ನು ಕಡಿತ ಮಾಡುವುದಿಲ್ಲ. ಒಂದು ವೇಳೆ 2 ಗಂಟೆಗೂ ಹೆಚ್ಚು ವಿಳಂಬವಾದಲ್ಲಿ, ಆ ನಂತರ ಪ್ರತಿ ಐದು ನಿಮಿಷಕ್ಕೆ ಒಂದು ಓವರ್ ಅನ್ನು ಕಡಿತ ಮಾಡಲಾಗುತ್ತದೆ.
* ಒಂದು ವೇಳೆ ಸಮಿಫೈನಲ್ ಪಂದ್ಯ ಮಳೆಯಿಂದ ಅರ್ಧಕ್ಕೆ ಮೊಟಕುಗೊಂಡರೆ ಅದರ ನಾಳೆಗೆ ಹಿಂದಿನ ದಿನ ಪಂದ್ಯ ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಮತ್ತೆ ಆರಂಭ ಮಾಡಲಾಗುತ್ತದೆ. ಅಂದರೆ, ನಾಳೆ ಭಾರತ ಟಾಸ್ ಗೆದ್ದು ನ್ಯೂಜಿಲೆಂಡ್ ವಿರುದ್ಧ ಬ್ಯಾಟಿಂಗ್ ಆಯ್ದುಕೊಳ್ಳುತ್ತದೆ ಅಂದುಕೊಳ್ಳಿ. ಭಾರತ ಬ್ಯಾಟಿಂಗ್ ಆರಂಭಿಸಿದಾಗ 10ನೇ ಓವರ್ ಮುಕ್ತಾಯಕ್ಕೆ ಮಳೆ ಬರುತ್ತದೆ ಅಂದುಕೊಳ್ಳಿ. ಒಂದು ವೇಳೆ ಮಳೆ ನಿಲ್ಲದೇ, ಇಡೀ ಕ್ರೀಡಾಂಗಣ ಆಡಲಾರದಷ್ಟು ಒದ್ದೆಯಾದರೆ, ಅದೇ ಪಂದ್ಯವನ್ನು ನಾಳೆಗೆ 11ನೇ ಓವರ್ನಿಂದಲೇ ಆರಂಭಿಸಲಾಗುತ್ತದೆ.
* ಸಮಿಫೈನಲ್ನಲ್ಲಿ ಒಂದು ಇನಿಂಗ್ಸ್ ಮುಕ್ತಾಯದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸುವಷ್ಟರಲ್ಲಿ ಮಳೆ ಬಂದು ಮತ್ತೆ ಪಂದ್ಯ ಆರಂಭವಾದರೆ, ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯದ ಫಲಿತಾಂಶವನ್ನು ನಿರ್ಣಯಿಸಲಾಗುತ್ತದೆ.
* ಒಂದು ವೇಳೆ ಸೈಕ್ಲೋನ್ ರೀತಿ ಮಳೆ ಹಿಡಿದುಕೊಂಡು ಸೆಮಿಫೈನಲ್ ಮತ್ತು ಮೀಸಲು ದಿನವೂ ಪಂದ್ಯ ರದ್ದಾದರೆ, ಲೀಗ್ ಹಂತದ ಅಂಕಗಳ ಆಧಾರದ ಮೇಲೆ ಫೈನಲ್ ಪ್ರವೇಶಿಸುವ ತಂಡವನ್ನು ನಿರ್ಣಯಿಸಲಾಗುತ್ತದೆ. ಉದಾಹರಣೆಗೆ ನಾಳೆ ನಡೆಯುವ ಪಂದ್ಯ ಈ ರೀತಿಯ ಪರಿಸ್ಥಿತಿಗೆ ಸಿಲುಕಿದರೆ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಫೈನಲ್ ಪ್ರವೇಶ ಮಾಡಲಿದೆ.
ಸೆಮೀಸ್ನಲ್ಲಿ ಮುಖಾಮುಖಿಯಾಗುವ ತಂಡಗಳು
ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸಮೀಸ್ ಪ್ರವೇಶ ಪಡೆದಿದ್ದು, ನವೆಂಬರ್ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
ನ.19ಕ್ಕೆ ವಿಶ್ವಕಪ್ ಹಬ್ಬಕ್ಕೆ ವಿದ್ಯುಕ್ತ ತೆರೆ
ಎರಡೂ ಸಮಿಫೈನಲ್ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್ ಟ್ರೋಫಿಯ ಜತೆಗೆ 4 ಮಿಲಿಯನ್ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್ ಅಪ್ ತಂಡಗಳು 2 ಮಿಲಿಯನ್ ಡಾಲರ್ ಬಹುಮಾನ ಮೊತ್ತ ಹಾಗೂ ಲೀಗ್ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್)
ಗಾಜಾ ಮೇಲಿನ ಹಿಡಿತ ಕಳೆದುಕೊಂಡ ಹಮಾಸ್ ದಕ್ಷಿಣಕ್ಕೆ ಪರಾರಿ: ಇಸ್ರೇಲ್ ರಕ್ಷಣಾ ಸಚಿವರ ಹೇಳಿಕೆ
ಲಂಕಾ ಕ್ರಿಕೆಟ್ನಲ್ಲಿ ಜಯ್ ಷಾ ಹಸ್ತಕ್ಷೇಪ: ಬಿಸಿಸಿಐ ಕಾರ್ಯದರ್ಶಿ ವಿರುದ್ಧ ಮಾಜಿ ನಾಯಕ ಅರ್ಜುನ ರಣತುಂಗ ಆರೋಪ