ಶಿಕಾರಿಪುರ: ಲಯನ್ಸ್ ಕ್ಲಬ್ ತನ್ನ ಸಾಮಾಜಿಕ ಕಳಕಳಿ ಹಾಗೂ ಸಮಾಜಮುಖಿ ಚಿಂತನೆಗಳಿಂದ ವಿಶ್ವಾದ್ಯಂತ ಗಮನ ಸೆಳೆದಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಎಂಜೆಎಫ್ ಲಯನ್ಸ್ ಕ್ಲಬ್ ಮತ್ತು ಎಲ್ಇಒ ಕ್ಲಬ್ನಿಂದ ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಲಯನ್ಸ್ ಕ್ಲಬ್ ಸೇವಾ ಕಾರ್ಯ ಅನನ್ಯ. ಶಿಕ್ಷಣ, ಆರೋಗ್ಯ, ಸ್ವಾವಲಂಬನೆ, ರಕ್ತದಾನ, ಪರಿಸರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ವರ್ಷವಿಡೀ ಲಯನ್ಸ್ ಕ್ಲಬ್ ತೊಡಗಿಸಿಕೊಂಡಿರುತ್ತದೆ. ಈ ಸಂಸ್ಥೆ ಯ ಸಾಮಾಜಿಕ ಕಳಕಳಿಯ ದ್ಯೋತಕವಾಗಿ ಇಂದು ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ನೀಡುತ್ತಿದ್ದಾರೆ. ಇದು ಅತ್ಯಂತ ಶ್ಲಾಘನೀಯ ವಿಚಾರವಾಗಿದೆ ಎಂದರು
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಎಲ್ಲ ಭಾಗ್ಯಗಳಿಗಿಂತ ಮಿಗಿಲಾದ ಭಾಗ್ಯ ಆರೋಗ್ಯಭಾಗ್ಯ. ಲಯನ್ಸ್ ಸಂಸ್ಥೆ ವರ್ಷವಿಡೀ ಉಚಿತ ಆರೋಗ್ಯ ತಪಾಸಣೆ ಶಿಬಿರದಂತಹ ಸಮಾಜಸೇವೆ ಮಾಡುತ್ತಿದೆ. ಈ ಸಂಸ್ಥೆಯ ಶಿಸ್ತು ಮತ್ತು ಅನುಶಾಸನ ಅದ್ಭುತ. ಇಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಅಷ್ಟೇ ಕಳಕಳಿಯಿಂದ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ನೀಡಿರುವುದು ಮಾದರಿ ಕಾರ್ಯವಾಗಿದೆ ಎಂದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಸಾನು, ಕಾರ್ಯದರ್ಶಿ ಬಾಲಚಂದ್ರ, ಖಜಾಂಚಿ ಪ್ರವೀಣ್, ಡಿಎಚ್ಒ ಡಾ. ರಾಜೇಶ್ ಸುರಗಿಹಳ್ಳಿ, ಟಿಎಚ್ಒ ಡಾ. ನವೀದ್, ಆಡಳಿತ ವೈದ್ಯಾಧಿಕಾರಿ ಡಾ. ಶಿವಾನಂದ್ ಇತರರಿದ್ದರು.