ಬೆಂಗಳೂರು: ಬಿಟ್ ಕಾಯಿನ್ (ಬಿಟಿಸಿ) ಪ್ರಕರಣಕ್ಕೆ ಮತ್ತೆ ಜೀವ ನೀಡಿರುವ ಕಾಂಗ್ರೆಸ್ ಸರ್ಕಾರ, ಬಹುಕೋಟಿ ಹಗರಣದ ತನಿಖೆಗೆ ಎಡಿಜಿಪಿ ನೇತೃತ್ವದಲ್ಲಿ ಎಸ್ಐಟಿ ರಚಿಸಿದೆ. ಸಿಐಡಿ ಎಡಿಜಿಪಿ ಮನೀಶ್ ಬರ್ಡೀಕರ್ ಅವರನ್ನು ಎಸ್ಐಟಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಡಿಐಜಿ ಡಾ.ಕೆ.ವಂಶಿಕೃಷ್ಣ, ಡಿಸಿಪಿ ಡಾ.ಅನೂಪ್ ಎ. ಶೆಟ್ಟಿ ಹಾಗೂ ಸಿಐಡಿ ಎಸ್ಪಿ ಶರತ್ ತಂಡದಲ್ಲಿ ಸದಸ್ಯರಾಗಿದ್ದಾರೆ.
ಬಿಟ್ ಕಾಯಿನ್ ಪ್ರಕರಣದ ತನಿಖೆಗೆ ಎಸ್ಐಟಿ ರಚನೆಯಾದ ಹಿನ್ನೆಲೆಯಲ್ಲಿ ನಿನ್ನೆ ಮಂಗಳವಾರ ಸಂಜೆ ಎಸ್ಐಟಿ ಟೀಂ ಜೊತೆ ಡಿಜಿ ಐಜಿಪಿ ಅಲೋಕ್ ಮೋಹನ್, ಸಭೆ ನಡೆಸಿದ್ದಾರೆ. ಡಿಜಿ ಸಲೀಂ, ಎಡಿಜಿಪಿ ಮನೀಶ್, ಡಿಐಜಿ ವಂಶಿ ಕೃಷ್ಣ, ಅನೂಪ್ ಶೆಟ್ಟಿ ಮತ್ತು ಶರತ್ ಜೊತೆ ಚರ್ಚೆ ನಡೆಸಿದ್ದು, ಈವರೆಗೆ ತನಿಖೆ ಏನಾಗಿದೆ, ತನಿಖೆ ಯಾವ ರೀತಿ ಸಾಗಬೇಕು ಎನ್ನುವುದರ ಬಗ್ಗೆ ಚರ್ಚಿಸಲಾಗಿದೆ.
ಶ್ರೀಕಿ ಪತ್ತೆಗೆ ಡಿಜಿ ಐಜಿಪಿ ಸೂಚನೆ
ಶ್ರೀಕಿ ಕುಟುಂಬಸ್ಥರ ಸಂಪರ್ಕಕ್ಕೂ ಸಿಗದಂತೆ ಎಸ್ಕೇಪ್ ಆಗಿರುವ ಹಿನ್ನೆಲೆಯಲ್ಲಿ ಮೊದಲು ಶ್ರೀಕಿ ಪತ್ತೆಗೆ ಡಿಜಿ ಐಜಿಪಿ ಸೂಚನೆ ನೀಡಿದ್ದಾರೆ. ಸದ್ಯ ಶ್ರೀಕಿ ಹುಡುಕಾಟಕ್ಕೆ ಸಿಐಡಿ ಎಸ್ಐಟಿ ಮುಂದಾಗಿದ್ದು, ಎಸ್ಐಟಿಯಿಂದ ಅಧಿಕೃತವಾಗಿ ತನಿಖೆ ಶುರುವಾಗಿದೆ.
ಬಿಟ್ ಕಾಯಿನ್ ಪ್ರಕರಣ: ಎಸ್ಐಟಿ ಮುಖ್ಯಸ್ಥರು, ಎಸ್ಪಿಗಳ ಜೊತೆ ಸಿಐಡಿ ಡಿಜಿಪಿ ಸಲೀಂ ಸಭೆ