ದೇವದುರ್ಗ: ಅಕ್ಷರ ಹಾಗೂ ಅಧ್ಯಾತ್ಮದ ಜ್ಞಾನಾರ್ಜನೆಯಿಂದ ಬದುಕು ಅರ್ಥಪೂರ್ಣವಾಗಲಿದೆ ಎಂದು ಸುಲ್ತಾನಪುರ ಪಂಚಾಕ್ಷರಿ ಬೃಹನ್ಮಠದ ಶ್ರೀಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಗಬ್ಬೂರು ಸಮೀಪದ ಸುಲ್ತಾನಪುರ ಶ್ರೀಪಂಚಾಕ್ಷರಿ ಬೃಹನ್ಮಠದಲ್ಲಿ ಬನದ ಹುಣ್ಣಿಮೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ 71ನೇ ಬೆಳದಿಂಗಳ ಮಾಸಿಕ ಶಿವಾನುಭವಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಧಾವಂತದ ಜೀವನದಲ್ಲಿ ಯುವಜನತೆ ಅಧ್ಯಾತ್ಮದಿಂದ ದೂರವಾಗುತ್ತಿದ್ದಾರೆ. ಇದರಿಂದ ಆತ್ಮವಿಶ್ವಾಸ, ಬದುಕಿನ ಮೌಲ್ಯ ಅರಿಯುವಲ್ಲಿ ವಿಫಲರಾಗುತ್ತಿದ್ದಾರೆ. ಅಧ್ಯಾತ್ಮದಿಂದ ಸರಳ ಜೀವನ, ಆತ್ಮವಿಶ್ವಾಸ ಪಡೆಯಲು ಸಾಧ್ಯ. ಬದುಕಿನ ಜಂಜಾಟದಲ್ಲಿ ಮನುಷ್ಯ ಒತ್ತಡಕ್ಕೆ ಒಳಗಾಗುತ್ತಿದ್ದಾನೆ. ಯುವಜನರು ಸಾಮಾಜಿಕ ಜಾಲತಾಣದ ಗೀಳಿನಿಂದ ಹೊರಬರಬೇಕು. ಸಮಾಜದ ಅಭಿವೃದ್ಧಿಗೆ ಶಿಕ್ಷಣ ಹಾಗೂ ಅಧ್ಯಾತ್ಮ ಅಗತ್ಯ ಎಂದರು.