ಕಡೂರು: ತಾಲೂಕಿನ 118 ಕೆರೆಗಳಿಗೆ ನೀರುಣಿಸುವ ಭದ್ರಾ ಉಪಕಣಿವೆ ಯೋಜನೆಯ ಕಾಮಗಾರಿಗಳು ನಡೆಯುತ್ತಿರುವ ದೊಡ್ಡಘಟ್ಟ, ದೇವನಕೆರೆ ಮುಂತಾದ ಸ್ಥಳಗಳಿಗೆ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಆನಂದ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಶಾಸಕರು, ತಾಲೂಕಿನ 118 ಕೆರೆಗಳೂ ಸೇರಿದಂತೆ ತರೀಕೆರೆ, ಚಿಕ್ಕಮಗಳೂರು ಹಾಗೂ ತರೀಕೆರೆ ಕ್ಷೇತ್ರಗಳ ಕೆರೆಗಳು ಈ ಯೋಜನೆ ಅಡಿಯಲ್ಲಿ ಬರುತ್ತವೆ. ತಾಲೂಕಿನ ಜೀವನಾಡಿ ಮದಗದ ಕೆರೆಗೆ ಬೀರೂರು ಬಳಿಯ ದೇವನಕೆರೆ ತನಕ ಗುರುತ್ವಾಕರ್ಷಣ ಶಕ್ತಿ ಮೂಲಕ ನೀರು ಬರಲಿದೆ. ಅಲ್ಲಿಂದ ಮದಗದ ಕೆರೆ ಮತ್ತು ಅದರ ಆಶ್ರಿತ 18 ಕೆರೆಗಳಿಗೆ ನೀರನ್ನು ಪಂಪ್ ಮಾಡಲು ಪಂಪ್ಹೌಸ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಮೂರು ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ತಂಗಲಿ ಮತ್ತು ವಿಷ್ಣು ಸಮುದ್ರ ಕೆರೆಗಳಿಗೆ ನೀರನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕವೇ ಪೈಪ್ ಮೂಲಕ ಕೊಂಡೊಯ್ಯಬೇಕಿದೆ. ಈ ಕಾರ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಅಗತ್ಯವಾಗಿದೆ. ಈ ಕುರಿತು ಹೆದ್ದಾರಿ ಪ್ರಾಧಿಕಾರಕ್ಕೆ ಅನುಮತಿ ಕೋರಿ ನಿಗಮದ ಮೂಲಕ ಪತ್ರ ಬರೆಯಲಾಗಿದೆ. ಕಾಮಗಾರಿಗಳಿಗೆ ಇರುವ ಅಡೆತಡೆಗಳನ್ನು ನಿವಾರಿಸಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ನಿಗಮದ ಅಧಿಕಾರಿಗಳಿಗೆ ಸೂಚಿಸಿಸಲಾಗಿದೆ ಎಂದರು.
ಲೋಕಸಭೆ ಚುನಾವಣೆ ಮತ್ತಿತರ ಕಾರ್ಯಗಳಿಂದಾಗಿ ಈ ಯೋಜನೆಯ ಮೇಲೆ ಗಮನ ಹರಿಸಲು ಸ್ವಲ್ಪ ನಿಧಾನವಾಯಿತು. ಇದೀಗ ಕಾಮಗಾರಿ ನಡೆಯುವ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಮುಂದಿನ ಒಂದೂವರೆ ವರ್ಷದಲ್ಲಿ ಈ ಯೋಜನೆ ಅನುಷ್ಠಾನಗೊಂಡು ತಾಲೂಕಿನ ಕೆರೆಗಳು ನೀರಿನಿಂದ ತುಂಬಿ ನಳನಳಿಸಬೇಕೆಂಬ ಆಶಯ ನನ್ನದಾಗಿದೆ. ಅದಕ್ಕಾಗಿ ವೈಯಕ್ತಿಕವಾಗಿ ಈ ಯೋಜನೆಯ ಕುರಿತು ನಿರಂತರ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಹೇಳಿದರು.
ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿ ಹರ್ಷ ಇತರರಿದ್ದರು.