ನಾಲತವಾಡ: ನಾರಾಯಣಪುರ ಜಲಾಶಯಕ್ಕೆ ಕೃಷ್ಣಾ ಹಾಗೂ ಮಲಪ್ರಭಾ ನದಿಯಿಂದ ಅಪಾರ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆಯ 25 ಗೇಟ್ ತೆರೆದು ಗುರುವಾರ ಕೃಷ್ಣೆಗೆ ಬಿಡಲಾಯಿತು.
ತೀರದ ಜನತೆಗೆ ಯಾವುದೇ ಅಪಾಯವಿಲ್ಲದಿದ್ದರೂ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದರಿಂದ ಹೊರ ಹರಿವು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಕೃಷ್ಣಾ ನದಿಯಿಂದ 1.40ಲಕ್ಷ ಕ್ಯೂಸೆಕ್ ಹಾಗೂ ಮಲಪ್ರಭಾ ನದಿಯಿಂದ 25 ಸಾವಿರ ಕ್ಯೂಸೆಕ್ ಸೇರಿ ಒಟ್ಟು 1.65ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.
ಜಲಾಶಯದ ಗರಿಷ್ಠ ಮಟ್ಟ 492.25 ಮೀ. ಇದ್ದು, ಗುರುವಾರ ಮಧ್ಯಾಹ್ನ 491.70 ಮೀ. ನೀರು ಸಂಗ್ರಹವಾಗಿತ್ತು. 1.76ಲಕ್ಷ ಕ್ಯೂಸೆಕ್ ಹೊರ ಹರಿವು ಇತ್ತು. 6 ಸಾವಿರ ಕ್ಯೂಸೆಕ್ ಪವರ್ ಹೌಸ್ಗೆ ಹಾಗೂ 5500 ಕ್ಯೂಸೆಕ್ ನೀರನ್ನು ಕೆನಾಲ್ ಮೂಲಕ ಹರಿಸಲಾಗುತ್ತಿದೆ ಎಂದು ಜಲಾಶಯದ ಸಹಾಯಕ ಅಭಿಯಂತರ ವಿಜಯಕುಮಾರ್ ಅರಳಿ ತಿಳಿಸಿದ್ದಾರೆ.