ಬೆಳಗಾವಿ: ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿ ಭೀಕರ ಭಾನುವಾರ ಭೀಕರ ಅಪಘಾತ ಸಂಭವಿಸಿದ್ದು, ತಾಯಿ-ಮಗಳು ಸೇರಿ ನಾಲ್ವರು ದುರಂತ ಅಂತ್ಯಕಂಡಿದ್ದಾರೆ. ಅಪಘಾತದ ರಭಸಕ್ಕೆ ವಾಹನಗಳು ನಜ್ಜುಗುಜ್ಜಾಗಿದ್ದು, ಮಹಾಲಯ ಅಮಾವಸ್ಯೆ ದಿನದಂದು ಸಂಭವಿಸಿದ ಈ ಭೀಕರ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಕುಡಚಿ ಠಾಣೆ ಎಎಸ್ಐ ವೈ.ಎಂ.ಹಲಕಿ ಅವರ ಪತ್ನಿ ರುಕ್ಮಿಣಿ ಹಳಕಿ(48) ಮತ್ತು ಇವರ ಪುತ್ರಿ ಅಕ್ಷತಾ ಹಳಕಿ(22), ಕಾರು ಚಾಲಕ ನಿಖಿಲ್ ಕದಂ(24), ವೃದ್ಧೆ ಹನುಮವ್ವ ಚಿಕ್ಕಲಕಟ್ಟಿ(66) ಮೃತ ದುರ್ದೈವಿಗಳು. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಎಎಸ್ಐ ವೈ.ಎಂ.ಹಲಕಿ ಅವರ ಕುಟುಂಬಸ್ಥರು ಯರಗಟ್ಟಿಯತ್ತ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸಿಮೆಂಟ್ ತುಂಬಿಕೊಂಡು ಲೋಕಾಪುರದಿಂದ ಗೋವಾಕ್ಕೆ ತೆರಳುತ್ತಿದ್ದ ಲಾರಿಯು ಸವದತ್ತಿ ತಾಲೂಕಿನ ಬುದಿಗೊಪ್ಪ ಕ್ರಾಸ್ಬಳಿ ಕಾರು ಮತ್ತು ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಚಾಲಕ ನಿಖಿಲ್, ಎಎಸ್ಐ ಪತ್ನಿ ರುಕ್ಮಿಣಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹಗಳನ್ನು ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಬೈಕಿನಲ್ಲಿ ಹಿಂಬದಿ ಕುಳಿತಿದ್ದ ಹನುಮವ್ವ ಹಾಗೂ ಕಾರಿನಲ್ಲಿದ್ದ ಅಕ್ಷತಾ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದಾರೆ. ಬೈಕ್ ಸವಾರ ಸೇರಿದಂತೆ ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಡಾ.ಸಂಜೀವ್ ಪಾಟೀಲ್ ಹಾಗೂ ಮುರಗೋಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಸುದ್ದಿ ತಿಳಿದು ಕಂಗಾಲಾದ ಎಎಸ್ಐ ವೈ.ಎಂ. ಹಲಕಿ ಅವರು ಕಣ್ಣೀರಿಡುತ್ತಲೇ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
ಅಪಘಾತದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ ಮೃತ್ಯು: ಸಾವಲ್ಲೂ ಸಾರ್ಥಕತೆ ಮೆರೆದ ಪ್ರತಿಭಾವಂತ