ಉಗರಗೋಳ: ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಸೋಮವಾರ ಹುಂಡಿ ಎಣಿಕೆ ಪ್ರಕ್ರಿಯೆ ನಡೆಯಿತು. 33.44 ಲಕ್ಷ ರೂ. ನಗದು, 5.11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 62,390 ರೂ. ಮೌಲ್ಯದ ಬೆಳ್ಳಿ ಆಭರಣಗಳು ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಮಾಹಿತಿ ನೀಡಿದರು.
ಸೌಲಭ್ಯ ಕಲ್ಪಿಸಲು ಕ್ರಮ: ದೇವಸ್ಥಾನಕ್ಕೆ ಬರುವ ಆದಾಯ ಸದ್ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. 246 ಕೊಠಡಿಗಳ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿ ಕೊನೆಯ ಹಂತ ತಲುಪಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ನೀರಿನ ಟ್ಯಾಂಕ್ ನಿರ್ಮಿಸಲಾಗುತ್ತಿದೆ ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ದೊಡಗೌಡರ ತಿಳಿಸಿದ್ದಾರೆ.
ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರಾದ ವೈ.ವೈ.ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ರಮೇಶ ಗೋಮಾಡಿ, ಚಂದರಗಿ, ಆಯುಕ್ತ ಬಸವರಾಜ ಜಿರಗ್ಯಾಳ, ಅಧೀಕ್ಷಕ ಬಾಳೇಶ ಅಬ್ಬಾಯಿ, ಎ.ವಿ.ಮೂಳ್ಳೂರ, ದೇವಸ್ಥಾನ ಅಧೀಕ್ಷಕರಾದ ಅರವಿಂದ ಮಾಳಗೆ, ನಾಗರತ್ನಾ ಚೋಳಿನ, ಎಎಸ್ಐ ಎನ್.ವಿ.ಧಾರವಾಡ, ಪಿ.ಎಫ್.ಗೋವನಕೊಪ್ಪ, ಸಿಬ್ಬಂದಿ ಇದ್ದರು.
ಯಲ್ಲಮ್ಮನ ಗುಡ್ಡಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವುದು.
ಆನಂದ ಮಾಮನಿ ವಿಧಾನಸಭೆ ಉಪಸಭಾಧ್ಯಕ್ಷ, ಅಧ್ಯಕ್ಷ, ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ
ಯಲ್ಲಮ್ಮನ ಗುಡ್ಡಕ್ಕೆ ಬರುವ ಆದಾಯ ಹೆಚ್ಚುತ್ತಿರುವುದು ಸಂತಸದ ಸಂಗತಿ. ಭಕ್ತರು ಕಾಣಿಕೆ ನೀಡುವ ಜತೆಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುತ್ತಿದ್ದಾರೆ.
| ಬಸಯ್ಯ ಹಿರೇಮಠ, ಅಧ್ಯಕ್ಷ, ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ