ತುಮಕೂರು: ಪ್ರತಿನಿತ್ಯ ಒಂದಲ್ಲ ಒಂದು ಕೋಮುದ್ವೇಷ ಬಿತ್ತುವ ಟನೆಗಳ ನಡುವೆ ಸಿದ್ಧಗಂಗಾಮಠದಲ್ಲಿ ಸೌಹಾರ್ದತೆ ಹಾಗೂ ಭಾವೈಕ್ಯತೆಯ ರಂಜಾನ್ ಆಚರಣೆ ಅಂಗವಾಗಿ ಇಫ್ತಿಯಾರ್ ಕೂಟ ಏರ್ಪಡಿಸಲಾಗಿತ್ತು.
ರಂಜಾನ್ ಪ್ರಯುಕ್ತ ಮುಸ್ಲಿಂ ಸಮುದಾಯದ ಅನೇಕ ಮುಖಂಡರು ಶ್ರೀಮಠದಲ್ಲಿ ಶುಕ್ರವಾರ ಸಂಜೆ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿದ್ದು, ಮಠದ ಅಂಗಳದಲ್ಲಿ ಮೊದಲ ಬಾರಿ ಇಫ್ತಿಯಾರ್ ಕೂಟ ಏರ್ಪಡಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಭೇಟಿ ಮಾಡಿ ಮುಖಂಡರು ಆಶೀರ್ವಾದ ಪಡೆದರು. ದೈನಂದಿನ ಉಪವಾಸವನ್ನು ನಿಲ್ಲಿಸಿ ಶ್ರೀಮಠದಲ್ಲಿಯೇ ಮುಸ್ಲಿಂ ಮುಖಂಡರು ಆಹಾರ ಸೇವಿಸಿದರು. ಈ ವೇಳೆ ನಗರದ ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಮೆಹ್ರೋಜ್ ಖಾನ್ ಮತ್ತಿತರರು ಭಾಗಿಯಾಗಿದ್ದರು.
ದೇವನೊಬ್ಬ ನಾಮ ಹಲವು: ಪವಿತ್ರವಾದ ಸಿದ್ಧಗಂಗಾಮಠದಲ್ಲಿ ಉಪವಾಸ ಆಚರಣೆ ಮಾಡಿದ್ದು, ಇಡೀ ಭಾರತದಲ್ಲಿ ಅಕ್ಷರ, ಅನ್ನ, ಆಶ್ರಯ ದಾಸೋಹ ಕಲ್ಪಿಸಿದ ಮಹಾಸಂತರಿದ್ದ ಈ ನೆಲವು ವಿಶೇಷವೆನಿಸಿದೆ. ಈ ಸಂತರ ಬೀಡಿನಲ್ಲಿ ಮುಸ್ಲಿಮರು ರಂಜಾನ್ನಲ್ಲಿ ಶ್ರೀಮಠದ ಪ್ರಸಾದ ಸ್ವೀಕರಿಸುವ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಎಸ್.ಆರ್.ಮೆಹ್ರೋಜ್ ಖಾನ್ ಹೇಳಿದರು. ಭಾರತವು ಸೌಹಾರ್ದತೆ, ಸಹಬಾಳ್ವೆಗೆ ಹೆಸರಾದ ದೇಶ. ಹಿಂದು&ಮುಸ್ಲಿಂ, ಕೆಸ್ತ, ಸಿಖ್, ಜೈನ ಧರ್ಮ ಸೇರಿ ಎಲ್ಲ ಧರ್ಮಿಯರು ಅಣ್ಣತಮ್ಮಂದಿರಂತೆ ಬಾಳುತ್ತಿದ್ದೇವೆ. ಎಲ್ಲ ಹಬ್ಬಗಳನ್ನು ಒಂದಾಗಿ ಆಚರಿಸುವುದು ನಮ್ಮ ವಿಶೇಷತೆ. ಸಿದ್ದಗಂಗೆಯ ನೆಲದಿಂದ ನಾವೆಲ್ಲಾ ಒಗ್ಗೂಡಿ ಎಲ್ಲ ಹಬ್ಬಹರಿದಿನಗಳನ್ನು ಆಚರಿಸುವ ನಿಟ್ಟಿನಲ್ಲಿ ಇಫ್ತಿಯಾರ್ ಕೂಟ ಆಯೋಜಿಸಲಾಗಿತ್ತು. ದೇವನೊಬ್ಬ ನಾಮಹಲವು ಎಂಬಂತೆ ನಾವೆಲ್ಲಾ ಒಗ್ಗೂಡಿ ಬಾಳೋಣ ಎಂದರು. ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಸಹೋದರತ್ವಕ್ಕೆ ಮತ್ತೊಂದು ಹೆಸರೇ ಸಿದ್ಧಗಂಗಾ ಕ್ಷೇತ್ರ. ಸ್ವಾಮೀಜಿಯವರ ಸನ್ನಿಧಾನದಲ್ಲಿ ಇಫ್ತಿಯಾರ್ ಕೂಟ ಆಚರಿಸುತ್ತಿದ್ದೇವೆ. ಭಾರತೀಯರು ಶಾಂತಿ, ಸೌಹಾರ್ದತೆಯಿಂದ ಬಾಳುವಂತೆ ಶ್ರೀಗಳು ಕರೆನೀಡಿದ್ದು, ಎಲ್ಲ ಜಾತಿ, ಧರ್ಮದವರಿಗೆ ತ್ರಿವಿಧದಾಸೋಹ ಕಲ್ಪಿಸಿರುವ ಮಠದ ಅಂಗಳದಲ್ಲಿ ಇಫ್ತಿಯಾರ್ ಕೂಟ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ನಮನಗಳನ್ನು ಸಲ್ಲಿಸಿದರು.