ಚೆನ್ನೈ: ಐಷಾರಾಮಿ ಕಾರು ಆಮದು ಸುಂಕವನ್ನು ಪಾವತಿಸಿದೇ ಚೆನ್ನೈ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಖ್ಯಾತ ನಟ ವಿಜಯ್ ಈಗ ಕೊಂಚ ನಿರಾಳರಾಗಿದ್ದಾರೆ. ಏಕ ಸದಸ್ಯ ಪೀಠದ ನ್ಯಾಯಾಧೀಶರು ವಿಜಯ್ ವಿರುದ್ಧ ಮಾಡಿದ್ದ ಕಟುವಾದ ಕಾಮೆಂಟ್ಗಳನ್ನು ತೀರ್ಪಿನಿ ಕಡತದಿಂದ ತೆಗೆಯುವಂತೆ ಮದ್ರಾಸ್ ಹೈಕೋರ್ಟ್ ವಿಜಯ್ ಪರವಾಗಿ ತೀರ್ಪು ನೀಡಿದೆ.
2012ರಲ್ಲಿ ಇಂಗ್ಲೆಂಡ್ನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರ್ ಅನ್ನು ವಿಜಯ್ ಆಮದು ಮಾಡಿಕೊಂಡಿದ್ದರು. ಆದರೆ ಶೇ. 80ರಷ್ಟು ಪ್ರವೇಶ ತೆರಿಗೆಯನ್ನು ಕಟ್ಟದೇ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಕಂಪೆನಿಯು ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದರು. ಅದೇ ವರ್ಷ ಜುಲೈನಲ್ಲಿ ವಿಚಾರಣೆ ನಡೆಸಿದ ಕೋರ್ಟ್ ವಿಜಯ್ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೆ, ನ್ಯಾಯಾಧೀಶ ಎಸ್.ಎಂ. ಸುಬ್ರಮಣಿಯಂ ಅವರು ವಿಜಯ್ ಅವರನ್ನು ಕಟುವಾದ ಪದಗಳಿಂದ ಟೀಕಿಸಿದ್ದರು.
ಅವರ ಸಿನಿಮಾ ಪಾತ್ರವು ತೆರಿಗೆ ಅನುಸರಣೆಯನ್ನು ಬೋಧಿಸಿದರೆ, ಅವರು ನಿಜ ಜೀವನದಲ್ಲಿ ತೆರಿಗೆ ವಿನಾಯಿತಿಯನ್ನು ಬಯಸುತ್ತಿದ್ದಾರೆ. ಸರಿಯಾಗಿ ತೆರಿಗೆ ಪಾವತಿಸಿದಾಗ ಮಾತ್ರ ಅವನು ಒಬ್ಬ ‘ರಿಯಲ್ ಹೀರೋ’ ಆಗುತ್ತಾನೆ ಎಂದು ಏಕ ಸದಸ್ಯ ಪೀಠ ವಿಜಯ್ಗೆ ಬುದ್ಧಿವಾದ ಹೇಳಿತ್ತು.
ತೆರಿಗೆ ವಂಚನೆಯನ್ನು ಒಂದು ರಾಷ್ಟ್ರ ವಿರೋಧಿ ಅಭ್ಯಾಸ, ವರ್ತನೆ ಮತ್ತು ಮನಸ್ಥಿತಿ ಹಾಗೂ ಅಸಂವಿಧಾನಿಕ ಎಂದು ಅರ್ಥೈಸಬೇಕು. ಈ ನಟರು ಸಮಾಜದಲ್ಲಿ ಸಾಮಾಜಿಕ ನ್ಯಾಯವನ್ನು ತರಲು ತಮ್ಮನ್ನು ತಾವು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅವರ ಚಿತ್ರಗಳು ಸಮಾಜದಲ್ಲಿನ ಭ್ರಷ್ಟ ಚಟುವಟಿಕೆಗಳ ವಿರುದ್ಧವಾಗಿವೆ. ಆದರೆ, ನಿಜ ಜೀವನದಲ್ಲಿ ಅವರು ತೆರಿಗೆಯನ್ನು ವಂಚಿಸುತ್ತಿದ್ದಾರೆ ಮತ್ತು ಕಾನೂನುಗಳ ನಿಬಂಧನೆಗಳಿಗೆ ಹೊಂದಿಕೆಯಾಗದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಕೋರ್ಟ್ ಛೀಮಾರಿ ಹಾಕಿತ್ತು. ಅಲ್ಲದೆ, 1 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಕೇಳಿತು.
ತನ್ನ ವಿರುದ್ಧದ ಕಟು ಟೀಕೆಗಳನ್ನು ಖಂಡಿಸಿ ವಿಜಯ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂತಹ ಹೇಳಿಕೆಗಳು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲ ಮತ್ತು ಅನಗತ್ಯ ಎಂದು ವಿಜಯ್ ಪರ ವಕೀಲರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅವರಿಗೆ ವಿಧಿಸಿರುವ ಒಂದು ಲಕ್ಷ ರೂಪಾಯಿ ದಂಡವನ್ನು ರದ್ದುಪಡಿಸಬೇಕು ಹಾಗೂ ತಮ್ಮ ವಿರುದ್ಧ ಬಂದಿರುವ ಟೀಕೆಗಳನ್ನು ತೀರ್ಪಿನಿಂದ ತೆಗೆದುಹಾಕಬೇಕು ಎಂದು ಮನವಿಯಲ್ಲಿ ಕೋರಿದ್ದರು. ಆಗಸ್ಟ್ 7 ರಂದು 32 ಲಕ್ಷ 30 ಸಾವಿರ ರೂಪಾಯಿ ಬಾಕಿ ತೆರಿಗೆ ಪಾವತಿಸಲಾಗಿದೆ ಮತ್ತು ಪ್ರಕರಣದ ದಾಖಲೆಗಳಲ್ಲಿ ವೃತ್ತಿಯನ್ನು ನಮೂದಿಸುವ ಅಗತ್ಯವಿಲ್ಲ ಎಂದು ಹೇಳಿದರು.
ತೆರಿಗೆ ಪಾವತಿಸುವುದನ್ನು ತಪ್ಪಿಸಲು ಮೊಕದ್ದಮೆ ಹೂಡಲಾಗಿದೆ ಎಂದು ಕಾಮೆಂಟ್ ಮಾಡುವುದು ಅನಗತ್ಯ ಎಂದು ಅರ್ಜಿಯಲ್ಲಿ ವಿಜಯ್ ಪರ ವಕೀಲ ಹೇಳಿದ್ದರು. ವಿಜಯ್ ಅವರನ್ನು ‘ದೇಶವಿರೋಧಿ’ ಎಂದು ಹೆಸರಿಸಲಾಗಿದೆ ಮತ್ತು ನ್ಯಾಯಾಧೀಶರು ಮಾಡಿದ ಅವಲೋಕನಗಳು ನಟನಿಗೆ ನಕಾರಾತ್ಮಕ ಪ್ರಚಾರವನ್ನು ಸೃಷ್ಟಿಸಿವೆ ಎಂದು ವಕೀಲರು ವಾದಿಸಿದರು.
ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪುಷ್ಪ ಸತ್ಯನಾರಾಯಣ ಮತ್ತು ಮೊಹಮ್ಮದ್ ಶಫೀಕ್ ಅವರ ವಿಭಾಗೀಯ ಪೀಠವು ನಟ ವಿಜಯ್ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಹಿಂದಿನ ತೀರ್ಪಿನಲ್ಲಿ ಮಾಡಿದ ಕಟು ಕಾಮೆಂಟ್ಗಳನ್ನು ತೆಗೆದುಹಾಕಿತು. (ಏಜೆನ್ಸೀಸ್)
ಐಷಾರಾಮಿ ಕಾರಿಗೆ ತೆರಿಗೆ ಕಟ್ಟದೇ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದ್ದ ನಟನೀಗ ಸ್ವಲ್ಪ ನಿರಾಳ