ಹೂವಿನಹೆಡಗಿ ಸೇತುವೆ, ಗಡ್ಡೆಗೂಳಿ ಬಸವೇಶ್ವರ ದೇಗುಲ ಮುಳುಗಡೆ | ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಜಲದಿಗ್ಬಂಧನ
ದೇವದುರ್ಗ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಶುಕ್ರವಾರ ರಾತ್ರಿಯಿಂದ 3.44ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ತಾಲೂಕಿನ 28 ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದ್ದು, ಐದಾರು ಗ್ರಾಮಗಳು ಅಪಾಯ ಎದುರಿಸುತ್ತಿವೆ.
ಹೂವಿನಹೆಡಗಿ ಸೇತುವೆ, ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಿದ್ದರೆ, ಕೊಪ್ಪರದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಸುತ್ತಲೂ ನೀರು ಆವರಿಸಿದೆ. ಗೂಗಲ್ನ ಶ್ರೀ ಅಲ್ಲಮಪ್ರಭು ದೇವಸ್ಥಾನ ಸಮೀಪ ನೀರು ಬಂದಿದ್ದು, ಸುತ್ತುವರಿಯುವ ಸಾಧ್ಯತೆ ಇದೆ. ವೀರಗೋಟದ ಶ್ರೀ ಆದಿಮೌನಲಿಂಗೇಶ್ವರ ದೇವಸ್ಥಾನ ಸಮೀಪ ನೀರು ಬಂದು, ಸಂಪರ್ಕ ರಸ್ತೆ ಮುಳುಗಿದರೆ, ವಿವಿಧ ಗ್ರಾಮಗಳ ರೈತರ ಜಮೀನಿಗೆ ನೀರು ನುಗ್ಗುತ್ತಿದೆ.
ಹೂವಿನಹೆಡಗಿ ಸೇತುವೆ ಮುಳುಗಿದ ಕಾರಣ ವಾಹನ ಸಂಚಾರ ಶುಕ್ರವಾರ ಮಧ್ಯಾಹ್ನದಿಂದ ಬಂದ್ ಮಾಡಲಾಗಿದೆ. ದಿನದ 24 ಗಂಟೆ ಪೊಲೀಸ್ ಕಾವಲು ನಿಯೋಜಿಸಲಾಗಿದೆ. ನದಿ ತೀರದ ಗ್ರಾಮಗಳಲ್ಲಿ ಗ್ರಾಪಂ ವತಿಯಿಂದ ಡಂಗೂರು ಸಾರಲಾಗಿದೆ. ನದಿಗೆ ಇಳಿಯದಂತೆ ಎಚ್ಚರಿಸಲಾಗಿದೆ. ಪೊಲೀಸರನ್ನು ನಿರಂತರ ಬೀಟ್ಗೆ ಕಳಿಸಲಾಗುತ್ತಿದೆ.
ಜನರಲ್ಲಿ ನೆರೆಯ ಆತಂಕ : ಕೃಷ್ಣಾ ನದಿಯಲ್ಲಿ ಸದ್ಯ 3.44ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ನೀರಿನ ಪ್ರಮಾಣ ಹೆಚ್ಚಾದಂತೆಲ್ಲ, ನದಿ ತೀರದ ಗ್ರಾಮಸ್ಥರಲ್ಲಿ ನೆರೆಹಾವಳಿ ಭಯ ಆವರಿಸಲಿದೆ. 2019ರಲ್ಲಿ 6.54 ಲಕ್ಷ ಕ್ಯೂಸೆಕ್ ನೀರು ಬಂದಿದ್ದರಿಂದ 14ಕ್ಕೂ ಹೆಚ್ಚು ಹಳ್ಳಿಗಳು ನೆರೆಗೆ ತುತ್ತಾಗಿದ್ದವು. ಹಲವು ಮನೆಗಳು ಬಿದ್ದು, ರೈತರ ಬೆಳೆಗಳು ಹಾಳಾಗಿದ್ದವು.