ನವದೆಹಲಿ: ಕರೊನಾ ಲಸಿಕೆ ವಿತರಣೆ ಅಭಿಯಾನ ದೇಶದಾದ್ಯಂತ ನಡೆಯುತ್ತಿದೆ. ರಾಜ್ಯಗಳಿಗೆ ಹಂಚಿಕೆಯಾಗುತ್ತಿರುವ ಲಸಿಕೆಗೆ ತೆರಿಗೆ ಹಾಕುತ್ತಿರುವ ವಿಚಾರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಕರಾರು ತೆಗೆದ ಬೆನ್ನಲ್ಲೇ, ಲಸಿಕೆಗೆ ತೆರಿಗೆ ಏಕೆ ಎನ್ನುವ ಪ್ರಶ್ನೆಗೆ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮಾನ್ ಉತ್ತರ ಕೊಟ್ಟಿದ್ದಾರೆ.
ಯಾವುದೇ ಲಸಿಕೆ ಅಥವಾ ಸಾಮಾಗ್ರಿ ತಯಾರಾಗುತ್ತಿದೆಯೆಂದರೆ ಅದಕ್ಕೆ ಒಂದಿಷ್ಟು ಕಚ್ಚಾ ವಸ್ತು ಬೇಕಾಗುತ್ತದೆ. ಲಸಿಕೆ ತಯಾರಕಾ ಸಂಸ್ಥೆಗಳು ಆ ಕಚ್ಚಾ ಸಾಮಾಗ್ರಿಯನ್ನು ತೆರಿಗೆ ಕೊಟ್ಟೇ ಖರೀದಿ ಮಾಡಿರುತ್ತಾರೆ. ಆದರೆ ಒಮ್ಮೆ ಅಂತಿಮ ಲಸಿಕೆ ಉತ್ಪಾದನೆ ಆದ ಮೇಲೆ ಅವರು ಆ ಕಚ್ಚಾ ವಸ್ತುವಿನ ತೆರಿಗೆಯನ್ನು ಮರುಪಾವತಿ ಮಾಡಿಸಿಕೊಳ್ಳಬಹುದು. ಈ ಸೌಲಭ್ಯ ಜಿಎಸ್ಟಿ ಕಟ್ಟುವ ಲಸಿಕೆ ಅಥವಾ ಸಾಮಾಗ್ರಿಗೆ ಮಾತ್ರವೇ ಅನ್ವಯವಾಗುತ್ತದೆ.
ಈಗೊಂದು ವೇಳೆ ನಾವು ಲಸಿಕೆಯ ಮೇಲಿನ ಜಿಎಸ್ಟಿಯನ್ನು ತೆಗೆದರೆ, ಆಗ ಉತ್ಪಾದಕರಿಗೆ ಕಚ್ಚಾ ವಸ್ತುವಿನ ಮೇಲಿನ ತೆರಿಗೆ ಹೊರೆಯೆನಿಸುತ್ತದೆ. ಆದ್ದರಿಂದ ಅವರು ಆ ಹಣವನ್ನು ಗ್ರಾಹಕರಿಂದ ಪಡೆಯುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಜಿಎಸ್ಟಿಗೆ ಒಳಪಡದ ಸಾಮಾಗ್ರಿ ಅಥವಾ ಲಸಿಕೆಗೆ ಕಚ್ಚಾ ವಸ್ತುವಿನ ಮೇಲಿನ ತೆರಿಗೆಯನ್ನು ಮರು ಪಡೆಯಲು ಆಗುವುದಿಲ್ಲ. ಇವೆರೆಡರಿಂದಲೂ ಹೊಡೆತ ಬೀಳುವುದು ಗ್ರಾಹಕನಿಗೇ. ಹಾಗಾಗಿ ಲಸಿಕೆಯನ್ನು ಜಿಎಸ್ಟಿ ಹೊರೆತಾಗಿ ಮಾರಾಟ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸಚಿವೆ ತಿಳಿಸಿದ್ದಾರೆ.
ಅದರಲ್ಲೂ ಲಸಿಕೆ ಮತ್ತು ಅದರ ಸಾಮಾಗ್ರಿಗಳ ರಫ್ತು ತೆರಿಗೆ ತೆಗೆದುಹಾಕಲಾಗಿದೆ. ಹಾಗೆಯೇ ಶೇ. 70 ಐಜಿಎಸ್ಟಿಯನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಲಸಿಕೆಗೆ ಹಾಕಲಾಗುತ್ತಿರುವ ತೆರಿಗೆಯನ್ನು ಕೂಡಲೇ ತೆಗೆದು ಹಾಕಬೇಕೆಂದು ಮಮತಾ ಬ್ಯಾನರ್ಜಿ ಅವರು ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಅದಕ್ಕೆ ಉತ್ತರವಾಗಿ ನಿರ್ಮಲಾ ಸೀತಾರಾಮನ್ ಅವರು 16 ಟ್ವೀಟ್ಗಳಲ್ಲಿ ಈ ಉತ್ತರ ನೀಡಿದ್ದಾರೆ. (ಏಜೆನ್ಸೀಸ್)
‘ಸರ್ಜಿಕಲ್ ಮಾಸ್ಕ್ ನಿಮಗ್ಯಾಕೆ? ಈ ಮಾಸ್ಕ್ ಹಾಕದೆ ನಮ್ಮನ್ನು ರಕ್ಷಿಸಿ’ ವೈದ್ಯರ ಮನವಿ